ಬೆಳಗಾಯಿತು ವಾರ್ತೆ
ಬಳ್ಳಾರಿ: ಮತದಾನ ಅಮೂಲ್ಯವಾದದ್ದು, ಹಾಗೆ ಮತದಾನ ನಮ್ಮ ಹಕ್ಕು ಹಾಗಾಗಿ ತಪ್ಪದೆ ಎಲ್ಲರೂ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ನಗರದ ಡಾ. ರಾಜಕುಮಾರ ರಸ್ತೆಯಲ್ಲಿರುವ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಮತದಾನ ಜಾಗೃತಿ ಅಭಿಯಾನದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಬಹಳ ಮುಖ್ಯವಾಗಿದೆ. ಕೆಲವು ತಪ್ಪು ಕಲ್ಪನೆಗಳಿಂದ ಸಿಟಿಗಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಮತದಾನ ಆಗುತ್ತಿದೆ. ಮತದಾನ ಮಾಡದಿದ್ದರೆ ನಾವು ನಮ್ಮ ಜವಾಬ್ದಾರಿ ಮತ್ತು ಹಕ್ಕನ್ನು ಕಳೆದುಕೊಳ್ಳುವಂತಾಗುತ್ತದೆ. ಮತದಾನ ಮಾಡುವುದರಿಂದ ನಮ್ಮ ಬೇಕು ಬೇಡಿಕೆಗಳನ್ನು ನಾವು ಕೇಳಲು ಅರ್ಹರಾಗಿರುತ್ತೇವೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲಿ ಮೇ ೭ರಂದು ಲೋಕಸಭಾ ಚುನಾವಣೆ ನಡೆಯಲಿದೆ. ತಮ್ಮದೇ ಎಲ್ಲರೂ ಸಹ ೧೦೦% ಮತದಾನ ಮಾಡುವ ಮೂಲಕ ಒಳ್ಳೆಯ ರಾಜ್ಯ ನಿರ್ಮಾಣ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಭಂಡಾರು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಶಂಕನೂರು, ಎಸಿ ಹೇಮಂತ್ ಕುಮಾರ್, ಪಾಲಿಕೆ ಆಯುಕ್ತರಾದ ಖಲೀಲ್ ಸಾಬ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ ಸೇರಿದಂತೆ ಇತರರು ಹಾಜರಿದ್ದರು.