ಬೆಳಗಾಯಿತು ವಾರ್ತೆ
ವಿಜಯನಗರ (ಹೊಸಪೇಟೆ): ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾದ ಯುವಕ ಕುಮಾರ ರಾಠೋಡ್ ಮುಂಬೈನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಮೀನುಗಾರಿಕೆ ವಿಜ್ಞಾನ ವಿಷಯದಲ್ಲಿ ಪಿಎಚ್ಡಿ ಪದವಿ ಗಳಿಸಿದ್ದಾರೆ.
ಲಿಂಗನಾಯಕನಹಳ್ಳಿ ತಾಂಡಾದ ಯುವಕ ಕುಮಾರ ರಾಠೋಡ್ ಅವರು, ಮುಂಬೈನ ಕೇಂದ್ರೀಯ ಮೀನುಗಾರಿಕೆ ಶಿಕ್ಷಣ ಸಂಸ್ಥೆ (icar-cife) ಯ ಜಲಚರ ಸಾಕಣೆ ವಿಭಾಗದಲ್ಲಿ ಸುಸ್ಥಿರ ಹ್ಯಾಲೋಫೈಟ್ ಆಧಾರಿತ ಸಮಗ್ರ ಮಲ್ಟಿ-ಟ್ರೋಫಿಕ್ ಉಪ್ಪುನೀರಿನ ಜಲಚರ ಸಾಕಣೆ ಮಾದರಿಗಳ ಮೌಲ್ಯಮಾಪನ (Assement of sustainable halophyte based integrated multi-trophic brackish water aquaculture models) ಎಂಬ ವಿಷಯದ ಕುರಿತು ಅಧ್ಯಯನ ನಡೆಸಿ ಮಹಾ ಪ್ರಬಂಧ ಮಂಡಿಸಿ ಪಿಎಚ್ಡಿ ಪದವಿ ಗಳಿಸಿದ್ದಾರೆ.
ಮುಂಬೈನ ಕೇಂದ್ರೀಯ ಮೀನುಗಾರಿಕೆ ಶಿಕ್ಷಣ ಸಂಸ್ಥೆಯ ಕಾಕಿನಾಡ ಸಂಶೋಧನಾ ಕೇಂದ್ರದ ಅಧಿಕಾರಿ ಮತ್ತು ಹಿರಿಯ ವಿಜ್ಞಾನಿ ಡಾ.ಮುರಳಿಧರ ಪಿ.ಅಂಡೆ ಅವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಪದವಿ ಅಧ್ಯಯನ ನಡೆಸಿದ್ದಾರೆ.
ತಾಯಿಯ ಸಂತಸ: ತಾಂಡಾ ಯುವಕ ಮುಂಬೈನಲ್ಲಿ ಪಿಎಚ್ಡಿ ಪಡೆದಿರುವುದಕ್ಕೆ ತಾಯಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಬರೀ ಒಂದು ಎಕರೆ ಜಮೀನು ಹೊಂದಿರುವ ಈರಿಬಾಯಿ ಮಗನಿಗೆ ಓದಿಸಿ ಈಗ ಎಲ್ಲರ ಕಣ್ಣಲ್ಲಿ ಮಹಾನ್ ಸಾಧಕಿಯಾಗಿ ಹೊರಹೊಮ್ಮಿದ್ದಾರೆ. ಈರಿಬಾಯಿಯ ಇನ್ನೋರ್ವ ಪುತ್ರ ಪ್ರಕಾಶ್ ರಾಠೋಡ್ ಕೂಡ ತನ್ನ ತಮ್ಮನ ಶಿಕ್ಷಣಕ್ಕಾಗಿ ಓದು ಅರ್ಧಕ್ಕೆ ನಿಲ್ಲಿಸಿ ತಾಯಿಗೆ ಬೆನ್ನೆಲುವಾಗಿ ನಿಂತಿದ್ದಾರೆ. ಇದರ ಫಲವಾಗಿ ಈಗ ಒಬ್ಬ ತಮ್ಮ ಡಾಕ್ಟೇರೆಟ್ ಪದವಿ ಗಳಿಸಲು ಸಾಧ್ಯವಾಗಿದೆ





