ಬೆಳಗಾಯಿತು ವಾರ್ತೆ
ಹರಪನಹಳ್ಳಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಬೇರೆಬೇರೆ ಊರುಗಳಿಂದ ವಸತಿ ನಿಲಯಕ್ಕೆ ಬಂದಿದ್ದಿರಿ ಎಲ್ಲರೂ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹರಪನಹಳ್ಳಿ ಶಾಸಕಿ ಎಂಪಿ ಲತಾ ಅವರು ಸಲಹೆ ನೀಡಿದರು.
ತಾಲ್ಲೂಕಿನ ಸರ್ಕಾರಿ ಬಾಲಕರ ಮೆಟ್ರಿಕ್ ನಂತರದ ವೃತ್ತಿಪರ ವಸತಿ ನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಿ ಚನ್ನಾಗಿ ಓದಬೇಕು. ನಿಲಯದಲ್ಲಿ ಅಡುಗೆ ಸರಿ ಇಲ್ಲ ಎಂದು ಸಿಬ್ಬಂದಿಗಳೊಂದಿಗೆ ಜಗಳವಾಡದೆ ತಮ್ಮ ಯಶಸ್ಸಿಗಾಗಿ ತಮ್ಮ ಸಮಯ ಮೀಸಲಿಡಬೇಕು ಎಂದರು.
ಇಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯನ್ನು ಮರೆತು ಬೇರೆಯವರ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದ್ದನ್ನು ದೂರ ಮಾಡಿ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ನಂತರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕಿ ವಿದ್ಯಾರ್ಥಿ ನಿಲಯದ ಮುಂದೆ ಮಳೆ ನೀರು ನಿಲ್ಲುವ ಜಾಗದಲ್ಲಿ ಮಣ್ಣು ಹಾಕಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಪನ್ಮೂಲ ವ್ಯಕ್ತಿ ಇಸ್ಮಾಯಿಲ್, ಬಸವರಾಜ್ ಬಂಡಾರಿ, ಬಿಸಿಎಂ ವಸತಿ ನಿಲಯದ ನಿಲಯ ಪಾಲಕರಾದ ಚಂದ್ರಪ್ಪ,
ನಿಲಯ ಪಾಲಕ ಬಸವರಾಜ, ಮಹದೇವಪ್ಪ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.