ಟ್ರಿನಿಡಾಡ್: ವೆಸ್ಟ್ಇಂಡೀಸ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 200 ರನ್ ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಅಂತಿಮ ಪಂದ್ಯದಲ್ಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಕಲ್ಪಿಸಲಾಗಿತ್ತು. ಹಾರ್ದಿಕ್ ಪಾಂಡ್ಯಾ ಸಾರಾಥ್ಯದಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ನಿಗಧಿತ 50 ಓವರ್ ಗಳಲ್ಲಿ ಇಶಾನ್ ಕಿಶಾನ್ (77), ಶುಭಮನ್ ಗಿಲ್ (85), ಸಂಜು ಸ್ಯಾಮ್ಸನ್ (51) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (70*) ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 351 ರನ್ ಪೇರಿಸಿತು.
ಬೃಹತ್ ಮೊತ್ತ ಬೆನ್ನಟ್ಟಿದ ವಿಂಡೀಸ್ 35.3 ಓವರ್ಗಳಲ್ಲಿ 151 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ವಿಂಡೀಸ್ನ ಎಲ್ಲ ಬ್ಯಾಟರ್ಗಳು ವೈಫಲ್ಯವನ್ನು ಅನುಭವಿಸಿದರು. ಭಾರತದ ಪರ ಶಾರ್ದೂಲ್ ಠಾಕೂರ್ ನಾಲ್ಕು, ಮುಕೇಶ್ ಕುಮಾರ್ ಮೂರು ಹಾಗೂ ಕುಲದೀಪ್ ಯಾದವ್ ವಿಕೆಟ್ ಗಳಿಸಿದರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಅಲ್ಲದೆ ಟೆಸ್ಟ್ ಬಳಿಕ ಏಕದಿನ ಸರಣಿಯಲ್ಲೂ ಜಯಭೇರಿ ಮೊಳಗಿಸಿದೆ.
ಭಾರತ ತಂಡವೀಗ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸಲಿದೆ.