ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ರಾಜ್ಯ ರಾಜಕೀಯದಲ್ಲಿ ಮುಂದಿನ ಮೂರು–ನಾಲ್ಕು ತಿಂಗಳಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್ ಈಶ್ವರಪ್ಪ ಅವರು ಹೇಳಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬೆಂಬಲಿಗರೆಂದು ಹೇಳಿಕೊಳ್ಳುವ ಕೆಲವು ಸಚಿವರು ಗುಂಪು ಸೇರಿ ಚರ್ಚೆ ನಡೆಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಾಧ್ಯತೆಯ ಹಿನ್ನೆಲೆ ಶಾಸಕರು ದೆಹಲಿಗೆ ತೆರಳುತ್ತಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು “ಯಾರು ದೆಹಲಿಗೆ ಹೋದರೂ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ ಎಂದ ಅವರು, ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಶಿಬಿರಗಳಾಗಿ ಎರಡು ಗುಂಪುಗಳಾಗಿದ್ದು, ಪಕ್ಷ ‘ಒಡೆದ ಮನೆ’ಯಂತಾಗಿದೆ. ಶೀಘ್ರದಲ್ಲೇ ಅದು ಸ್ಫೋಟಗೊಳ್ಳಲಿದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ದಾವಣಗೆರೆ ಉಪಚುನಾವಣೆ ವಿಚಾರ:
ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ ನಾಯಕರು ಕೆಲಸ ಮಾಡಿರುವ ಕುರಿತು ಪತ್ರಗಳು ಕೇಂದ್ರ ನಾಯಕರಿಗೆ ಹೋಗಿವೆ. ಪಕ್ಷವು ಮುಸ್ಲಿಂ ನಾಯಕರನ್ನು ಕಡೆಗಣಿಸಿದ್ದು, ಧಾರ್ಮಿಕ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.
ಉಚ್ಚಾಟಿತ ನಾಯಕರನ್ನು ಮರು ಸೇರ್ಪಡೆ ಮಾಡದಿದ್ದರೆ ಉತ್ತರ ಪ್ರದೇಶ ಮಾದರಿಯಲ್ಲಿ ಪ್ರತಿಕ್ರಿಯೆ ನೀಡಲಾಗುವುದು ಎಂದ ಅವರು,
ಇದರ ಜೊತೆಗೆ ದೇಶದಾದ್ಯಂತ ಕಾಂಗ್ರೆಸ್ ಕುಸಿತದ ಹಾದಿಯಲ್ಲಿದ್ದು, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಸರ್ಕಾರದಲ್ಲೂ ಬದಲಾವಣೆ ಆಗಲಿದೆ ಎಂದು ಹೇಳಿದರು.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳನ್ನು ಟೀಕಿಸಿದ ಈಶ್ವರಪ್ಪ, ಪ್ರಧಾನಿ ಮೊದಿ ಮತ್ತು ಆರ್ಎಸ್ಎಸ್ ಕುರಿತು ಮಾಡಿರುವ ಹೋಲಿಕೆಗಳು ಅಸಂಗತವಾಗಿವೆ. ಈ ಸಂಬಂಧ ಆಯೋಗದಿಂದ ನೋಟಿಸ್ ನೀಡಲಾಗಿದ್ದು, ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಕುರಿತು ಹೇಳಿಕೆ:
ತಾವು ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಹಾಗೂ ಹೊಸ ಪಕ್ಷವನ್ನು ಸ್ಥಾಪಿಸುವ ಯೋಚನೆಯಿಲ್ಲ. ಪಕ್ಷದಲ್ಲಿ ಶುದ್ಧೀಕರಣ ಅಗತ್ಯವಿದ್ದು, ಅದು ನಡೆದ ಬಳಿಕ ಮತ್ತೆ ಸೇರ್ಪಡೆಯಾಗುವುದಾಗಿ ಹೇಳಿದರು. ಹಿಂದೂತ್ವಕ್ಕೆ ಪಕ್ಷದಲ್ಲಿ ತಕ್ಕ ಮಟ್ಟಿನ ಮಹತ್ವ ಇಲ್ಲದಿದ್ದು, ಕುಟುಂಬ ರಾಜಕಾರಣ ಮೇಲುಗೈ ಸಾಧಿಸಿದೆ ಎಂದು ಆಕ್ಷೇಪಿಸಿದರು.





