ಬೆಳಗಾಯಿತು ವಾರ್ತೆ | Www.belagayithu.in
ಬೆಂಗಳೂರು: ‘ಬೆಂಗಳೂರು ರಾಜ್ಯದ ಶೇ 65ರಷ್ಟು ಆದಾಯ ಕೊಡುವ ನಗರ. ಇದೊಂದು ರೀತಿ ಹಾಲು ಕೊಡುವ ಹಸು ಇದ್ದಂತೆ. ಈ ಸರ್ಕಾರದಲ್ಲಿ ಹಾಲು ಕೊಡುವ ಹಸುವಿಗೆ ಮೇವಿಲ್ಲ. ಆದಾಯ ಕೊಡುವ ಬೆಂಗಳೂರಿನ ಅಭಿವೃದ್ಧಿ ಇಲ್ಲ ಎಂಬ ಸ್ಥಿತಿಗೆ ತಂದಿಟ್ಟಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಹೇಳಿದರು.
ಬೆಂಗಳೂರಿನ ಸಮಸ್ಯೆಯ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘ಕಳೆದ ಎರಡು–ಮೂರು ವರ್ಷಗಳಿಂದ ಬ್ರ್ಯಾಂಡ್ ಬೆಂಗಳೂರು ಹೆಸರಿನ ಜಪ ಆಗುತ್ತಿದೆಯೇ ಹೊರತು, ಬ್ರ್ಯಾಂಡೂ ಇಲ್ಲ ಬೆಂಗಳೂರೂ ಇಲ್ಲ. ಸಂಚಾರ ದಟ್ಟಣೆ ಸಮಸ್ಯೆ, ಕಸದ ಸಮಸ್ಯೆ ಸೇರಿ ಹಲವು ಸಮಸ್ಯೆಗಳ ಆಗರವಾಗಿದೆ’ ಎಂದು ದೂರಿದರು.
‘ಬೆಂಗಳೂರನ್ನು 5 ಭಾಗವಾಗಿ ವಿಭಜಿಸಿದರು. ಎಲ್ಲ ಪಾಲಿಕೆಗಳು ₹500 ಕೋಟಿಯಿಂದ ₹600 ಕೋಟಿ ಅನುದಾನ ಕೇಳುತ್ತಿವೆ. ಅನುದಾನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಈಗ ಬಾಂಡ್ ಮೂಲಕ ₹40 ಸಾವಿರ ಕೋಟಿ ಸಂಗ್ರಹಿಸಲು ಹೊರಟಿದ್ದಾರೆ. ಬಿಬಿಎಂಪಿ ಇದ್ದಾಗ ಬರುತ್ತಿದ್ದ ಆದಾಯ ₹4,600 ಕೋಟಿ. ಬಾಂಡ್ ಮೂಲಕ ಸಂಗ್ರಹಿಸುವ ದೊಡ್ಡ ಮೊತ್ತ ತೀರಿಸುವವರು ಯಾರು? ಇದು ಬೆಂಗಳೂರಿಗರ ಮೇಲೆ ಚಪ್ಪಡಿ ಎಳೆಯುವ ಕೆಲಸ’ ಎಂದು ಟೀಕಿಸಿದರು.
ಉಪ ಮುಖ್ಯಮಂತ್ರಿ ಅವರಂತೂ ದಿನ ಬೆಳಿಗ್ಗೆಯಾದರೆ ದೆಹಲಿ– ಬೆಂಗಳೂರು ಎಂದು ಓಡಾಡುತ್ತಿತ್ತಾರೆ. ಹೀಗಾಗಿ ಬೆಂಗಳೂರಿನ ಗೋಳು ಕೇಳುವವರು ಯಾರು’ ಎಂದು ಅಶೋಕ ಪ್ರಶ್ನಿಸಿದರು.





