ಬೆಳಗಾಯಿತು ವಾರ್ತೆ |Www.belagayithu.in
ಬಳ್ಳಾರಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ಗೆ ‘ಸರ್ಜಿಕಲ್ ಚೇರ್’ ನೀಡಲು ಕಾರಾಗೃಹ ಇಲಾಖೆ ಒಪ್ಪಿದೆಯಾದರೂ ದಾಖಲೆ ಪರಿಶೀಲನೆ ಬಳಿಕ ತೀರ್ಮಾನ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶನ್ ಅವರಿಗೆ ಬೆನ್ನು ಮೂಳೆ (ಎಲ್ -5) ನಲ್ಲಿ ಸಮಸ್ಯೆ ಇರುವ ಬಗ್ಗೆ ಮತ್ತು ಹಿಂದೊಮ್ಮೆ ಆಗಿದ್ದ ಕೈ ಮುರಿತದ ನೋವು ಇನ್ನೂ ಇರುವ ಬಗ್ಗೆ ಕುಟುಂಬಸ್ಥರು ಬಳ್ಳಾರಿ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿ, ಶೌಚಕ್ಕೆ ‘ಸರ್ಜಿಕಲ್ ಚೇರ್’ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅದರ ಪರಿಶೀಲನೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕೆಲವು ಜೈಲುಗಳಲ್ಲಿ ‘ವೆಸ್ಟರ್ನ್ ಕಮೋಡ್'(ಪಾಶ್ಚಾತ್ಯ ಮಾದರಿ ಶೌಚಾಲಯ) ಇದೆ. ಇಲ್ಲಿಯೂ ಒದಗಿಸಬಹುದು. ಆದರೆ, ಜೈಲಿನ ಎಲ್ಲ ಕೈದಿಗಳು ‘ಇಂಡಿಯನ್ ಕಮೋಡ್’ ಅನ್ನೇ ಬಳಸುತ್ತಿರುವಾಗ ದರ್ಶನ್ ಗೆ ಮಾತ್ರ ವೆಸ್ಟರ್ನ್ ಕಮೋಡ್ ನೀಡುವುದು ತಾರತಮ್ಯವಾಗಲಿದೆ. ಹಾಗಾಗಿ ವೆಸ್ಟರ್ನ್ ಕಮೋಡ್ ವ್ಯವಸ್ಥೆ ಒದಗಿಸುತ್ತಿಲ್ಲ’ ಎಂದು ಕಾರಾಗೃಹ ಇಲಾಖೆಯ ಉತ್ತರ ವಲಯ ಉಪಮಹಾ ನಿರೀಕ್ಷಕ ಟಿ. ಪಿ ಶೇಷ ತಿಳಿಸಿದರು.
ಇನ್ನೊಂದೆಡೆ, ಹೊರ ವಿಶೇಷ ಭದ್ರತಾ ಕೊಠಡಿಯಲ್ಲಿ ಪ್ರತ್ಯೇಕ ವಾಗಿರುವ ದರ್ಶನ್ ತಮ್ಮೊಂದಿಗೆ ಮಾತನಾಡಲು ಯಾರೂ ಇಲ್ಲದಿರುವ ಬಗ್ಗೆ ಸಿಬ್ಬಂದಿಯೊಂದಿಗೆ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.





