ಬೆಳಗಾಯಿತು ವಾರ್ತೆ|www.belagayithu.in
ಬಳ್ಳಾರಿ: ಪ್ರತಿ ಐದು ವರ್ಷದಂತೆ ಈ ಬಾರಿಯೂ ಚುನಾವಣೆ ಸಮೀಪಿಸುತ್ತಿದೆ.ದೊಡ್ಡ ದೊಡ್ಡ ಘೋಷಣೆಗಳೊಂದಿಗೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ತಯಾರಾಗುತ್ತಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಖಾಸಗೀಕರಣಗೊಂಡು ಜನಗಳ ಕೈಗೆಟುಕದಂತಾಗಿವೆ. ಉದ್ಯೋಗವಿಲ್ಲದೆ ಯುವಜನತೆ ಪರದಾಡುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ಇತ್ತ ಕೇಂದ್ರ ಮೋದಿ ಸರ್ಕಾರ ಈಗ ಅದರ ಬಗ್ಗೆ ಮಾತೇ ಎತ್ತುತ್ತಿಲ್ಲ. ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನದಲ್ಲಿದೆ. ಇನ್ನೊಂದು ಕಡೆ ದೇಶದ ಶೇ.77 ರಷ್ಟು ಸಂಪತ್ತು ಶೇ.10 ಮಂದಿ ಶ್ರೀಮಂತರ ಕೈಗಳಲ್ಲಿದೆ ಎಂದು ವರದಿಯಾಗಿದೆ. ಶ್ರೀಮಂತ ಕಾರ್ಪೊರೇಟ್ ಕಂಪನಿಗಳ ಆಶೀರ್ವಾದದಿಂದ ಅಧಿಕಾರಕ್ಕೆ ಬರುವ ಎಲ್ಲಾ ರಾಜಕೀಯ ಪಕ್ಷಗಳು ಅವರ ಪರವಾಗಿ ತರುವ ನೀತಿಗಳಿಂದಾಗಿ ದೇಶ ಈ ಸ್ಥಿತಿಗೆ ಬಂದಿದೆ.ಇಂದು ವಿಶ್ವಗುರು ಆಗಲು ಹೊರಟಿರುವ ಭಾರತದ ಪರಿಸ್ಥಿತಿ ಇದು!! ಜನಗಳು ಚುನಾವಣಾ ಪ್ರವಾಹದಲ್ಲಿ ಕೊಚ್ಚಿ ಹೋಗದೆ ಈ ರಾಜಕೀಯ ಪಕ್ಷಗಳ ಮುಖವಾಡಗಳನ್ನು ಅರ್ಥ ಮಾಡಿಕೊಂಡು ಈ ಶೋಷಣಾಯುಕ್ತ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕು” ಎಂದು ರಾಧಾಕೃಷ್ಣ ಅವರು ಕರೆ ನೀಡಿದರು.
ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ – ಬಳ್ಳಾರಿ ಜಿಲ್ಲಾ ಸಮಿತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನರ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಗಾಂಧಿ ಭವನದಿಂದ ಹೊರಟು ರಾಯಲ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿತು. ಮೆರವಣಿಗೆಯಲ್ಲಿ ವಿವಿಧ ಬಡಾವಣೆಗಳಿಂದ ನೂರಾರು ಜನರು, ವಿದ್ಯಾರ್ಥಿಗಳು, ರೈತ-ಕಾರ್ಮಿಕರು ಭಾಗವಹಿಸಿದ್ದರು. ಮತ್ತು ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.
‘ಬೇಟಿ ಬಚಾವೋ ಬೇಟಿ ಪಡಾವೋ’,’ ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮೋದಿ ಸರ್ಕಾರದ ಘೋಷಣೆಗಳು ಕೇವಲ ಘೋಷಣೆಗಳಾಗಿವೆ. ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೆ ಇವೆ. ಅಶ್ಲೀಲ ಸಿನಿಮಾ ಸಾಹಿತ್ಯವನ್ನು ಹರಿಬಿಟ್ಟು ವಿದ್ಯಾರ್ಥಿ ಯುವ ಜನರ ನೈತಿಕ ಬೆನ್ನೆಲುಬನ್ನು ಮುರಿಯುವ ಹುನ್ನಾರ ಹೊಂದಿರುವ ಸರ್ಕಾರಗಳ ವಿರುದ್ಧ ಪ್ರಬಲ ಹೋರಾಟ ಒಂದೇ ದಾರಿ. ಈ ದಾರಿಯಲ್ಲೇ ಜನಗಳು ಮುನ್ನಡೆಯಬೇಕು” ಎಂದು ಎಂ.ಎನ್.ಮಂಜುಳಾ ಅವರು ಹೇಳಿದರು.
ನಂತರ ಮಾತನಾಡಿದ ಎ.ದೇವದಾಸ್ ಅವರು ರಾಜ್ಯದಲ್ಲಿ ಬರ ಬರುತ್ತಿದೆ ಕುಡಿಯಲು ನೀರಿಲ್ಲದೆ ಜನಗಳು ಪರದಾಡುವಂತಾಗಿದೆ. ಬೆಳೆದ ಬೆಳೆ ಕೈಗು ಬರದೇ ,ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಉದ್ಯೋಗ ನೀಡುವ ನರೇಗಾ ಯೋಜನೆ ಕೂಡ ಸರಿಯಾಗಿ ಅನುಷ್ಠಾನಗೊಳ್ಳದೆ ಹಲವಾರು ಲೋಪದೋಷಗಳಿಂದ ಕೂಡಿದೆ. ಎಲ್ಲಾ ಸಮಸ್ಯೆಗಳ ವಿರುದ್ಧ ರೈತರು- ಕಾರ್ಮಿಕರು ಸೇರಿದಂತೆ ಎಲ್ಲಾ ದಮನಿತ ಜನತೆ ಒಂದಾಗಬೇಕು.ತಮ್ಮ ಪರವಾಗಿರುವ ಸಮಾ ಸಮಾಜವಾದಿ ಸಮಾಜವನ್ನು ತರಲು ಮುನ್ನುಗ್ಗಬೇಕು” ಎಂದು ಹೇಳಿದರು.
ಈ ಸಂಧರ್ಭದಲ್ಲಿ ಡಾ.ಪ್ರಮೋದ್ . ನಾಗಲಕ್ಷ್ಮಿ, ಸೋಮಶೇಖರ್ ಗೊಡ್ರು, ಶಾಂತ, ಗೋವಿಂದ, ನಾಗರತ್ನ, ಪಂಪಾಪತಿ ಕೋಳೂರು,ಹನುಮಪ್ಪ, ಈಶ್ವರಿ ,ಜಗದೀಶ್ ,ರಾಜ ವಿಜಯಲಕ್ಷ್ಮಿ, ರವಿಕಿರಣ್ ಹಾಗೂ ಹಲವಾರು ಬಡಾವಣೆಯ ,ಹಳ್ಳಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.