ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ನಗರದ ಪಾರ್ವತಿ ನಗರ ಮುಖ್ಯ ರಸ್ತೆಯ ಜೈಲ್ ಗೋಡಿಯ ಪಕ್ಕದಲ್ಲಿ ಇರುವ ತರಕಾರಿ ಮಾರುಕಟ್ಟೆಯಲ್ಲಿ, ವ್ಯಾಪಾರಿಗಳಿಗೆ ಲಾಟರಿ ಮೂಲಕ ಜಾಗ ವಿತರಿಸುವ ಕಾರ್ಯಕ್ರಮ ಗುರುವಾರ ನಡೆಯಿತು.
ಮಾರುಕಟ್ಟೆಯ ಅಂಗಡಿಗಳ ಸಂಖ್ಯೆಯನ್ನು ಲಾಟರಿ ವಿಧಾನದಲ್ಲಿ ಆಯ್ಕೆ ಮಾಡಿ, ಹತ್ತು ಜನ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅಧಿಕೃತವಾಗಿ ಜಾಗಗಳನ್ನು ಗುರುತಿಸಿ ಪತ್ರಗಳನ್ನು ನೀಡಲಾಯಿತು. ಈ ಪ್ರಕ್ರಿಯೆ ವ್ಯಾಪಾರಿಗಳ ಸಮಕ್ಷಮದಲ್ಲಿ ಪಾರದರ್ಶಕವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮೇಯರ್ ಗಾದೆಪ್ಪನವರು, ಶಾಸಕರಾದ ಭರತ್ ರೆಡ್ಡಿ ಅವರು, ಪಾಲಿಕೆ ಆಯುಕ್ತರು ಹಾಗೂ ಸದಸ್ಯರಾದ ಗುಡಿಗಂಟು ಹನುಮಂತು, ಕುಬೇರ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಗಣ್ಯರು, ವ್ಯಾಪಾರಿಗಳಿಗೆ ಸುಸಜ್ಜಿತ ವ್ಯವಸ್ಥೆ ಒದಗಿಸುವುದು ಹಾಗೂ ಸರಿಯಾದ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವುದು ನಗರಾಭಿವೃದ್ಧಿಗೆ ಸಹಕಾರಿ ಎಂದು ಹೇಳಿದರು. ಲಾಟರಿ ವಿಧಾನದಿಂದ ಜಾಗ ವಿತರಣೆಯಿಂದ ಯಾವುದೇ ಗೊಂದಲಗಳು ತಪ್ಪಿ, ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.





