ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಗೃಹ ಬಳಕೆಯ LPG ಸಿಲಿಂಡರ್ಗಳನ್ನು ಅಕ್ರಮವಾಗಿ ಸಂಗ್ರಹಿಸಿ, ವಾಣಿಜ್ಯ ಬಳಕೆಗೆ ಹೆಚ್ಚಿನ ದರಕ್ಕೆ ಅನಿಲ ತುಂಬಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಜಿಲ್ಲೆಯಲ್ಲಿ LPG ಸಿಲಿಂಡರ್ಗಳ ಕೃತಕ ಅಭಾವ ಸೃಷ್ಟಿಸುವುದು ಹಾಗೂ ಅಕ್ರಮ ಸಂಗ್ರಹ–ಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗೌತಮ ನಗರದಲ್ಲಿರುವ ವಾಟರ್ ಟ್ಯಾಂಕ್ ಹತ್ತಿರ ಅಕ್ರಮ ಚಟುವಟಿಕೆ ನಡೆಯುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಲಾಯಿತು.
ದಾಳಿ ವೇಳೆ ಗಂಗಾಮೂರ್ತಿ (28), ನಾಗಲಕೇರೆ ಹೊಸಪೇಟೆ ರಸ್ತೆ ನಿವಾಸಿ, ಗೃಹ ಬಳಕೆಯ ಸಿಲಿಂಡರ್ಗಳನ್ನು ಸಂಗ್ರಹಿಸಿ, ವಾಣಿಜ್ಯ ಬಳಕೆಯ ಖಾಲಿ ಸಿಲಿಂಡರ್ಗಳು ಹಾಗೂ ಆಟೋಗಳಿಗೆ ಅನಿಲವನ್ನು ಹೆಚ್ಚಿನ ದರಕ್ಕೆ ತುಂಬಿ ಮಾರಾಟ ಮಾಡುತ್ತಿದ್ದುದಾಗಿ ಪತ್ತೆಯಾಯಿತು.
ಪೊಲೀಸ್ ಇನ್ಸಪೆಕ್ಟರ್ ಉದಯ ರವಿ ನೇತೃತ್ವದಲ್ಲಿ, ಸಿಬ್ಬಂದಿ ಶ್ರೀನಿವಾಸ, ಬೀರಪ್ಪ, ನಾಗರೆಡ್ಡಿ, ರಮೇಶ್ ಬಾಬು ಹಾಗೂ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಅವಿಶೇಷ ಅಂಬೇಡ್ಕರ್ ಅವರ ತಂಡ ಜಂಟಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳದಿಂದ 4 ವಾಣಿಜ್ಯ ಹಾಗೂ 4 ಗೃಹ ಬಳಕೆಯ ಒಟ್ಟು 8 LPG ಸಿಲಿಂಡರ್ಗಳು (ಒಟ್ಟು ಮೌಲ್ಯ ₹25,640) ಮತ್ತು ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 90/2026 ದಾಖಲಿಸಲಾಗಿದ್ದು, ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ LPG ನಿಯಂತ್ರಣ ಆದೇಶ 2000ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಮಾಹಿತಿ ನೀಡಿದ್ದಾರೆ.





