ಬೆಳಗಾಯಿತು ವಾರ್ತೆ| Www.belagayithu.in
ಸಿರುಗುಪ್ಪ: ಮಳೆಯ ಕೊರತೆಯಿಂದ ಬೆಳೆಗಳ ಭವಿಷ್ಯದ ಬಗ್ಗೆ ಆತಂಕಗೊಂಡಿರುವ ರೈತರು ಉತ್ತಮ ಮಳೆಯಾಗಲಿ ಹಾಗೂ ಬೆಳೆ ಸಮೃದ್ಧಿಯಾಗಿ ಬೆಳೆಯಲಿ ಎಂಬ ಆಶಯದಿಂದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವರಾದ ಬುಡ್ಡೆಕಲ್ಲಪ್ಪ ದೇವರಿಗೆ 101 ಕೊಡ ನೀರು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಮಳೆಯ ಅಭಾವದಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ರೈತರು ಒಗ್ಗೂಡಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಬುಡ್ಡೆಕಲ್ಲಪ್ಪ ದೇವರಿಗೆ 101 ಕೊಡ ನೀರು ಹಾಕಿದ ಬಳಿಕ ಗ್ರಾಮದ ಇತರೆ ದೇವಾಲಯಗಳಲ್ಲಿಯೂ ಐದು ಕೊಡ ನೀರು ಅರ್ಪಿಸಿ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದರು.
ಪೂಜೆಯ ನಂತರ ಗ್ರಾಮಸ್ಥರು, ರೈತರು, ಮಹಿಳೆಯರು ಹಾಗೂ ಯುವಕರು ಸೇರಿ ವಾಲಾಗ ಊದುತ್ತಾ, ಬೆಳಕು ಹರಿಯುವ ತನಕ ಭಜನೆ ನಡೆಸಿ ದೇವರ ಕೃಪೆಗಾಗಿ ಮೊರೆಯಿಟ್ಟರು. ಉತ್ತಮ ಮಳೆಯಾಗಿ ರೈತರ ಸಂಕಷ್ಟ ನಿವಾರಣೆಯಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಎಂದು ಪ್ರಾರ್ಥಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ರೈತರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬ ಆಶಯವನ್ನು ದೇವರ ಮುಂದೆ ಅರ್ಪಿಸಿದರು.





