ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ತುಂಗಭದ್ರ ಜಲಾಶಯದಲ್ಲಿ ದಿನದಿಂದ ದಿನಕ್ಕೆ ಹೂಳು ಹೆಚ್ಚುತ್ತಿರುವ ಪರಿಣಾಮ ನೀರು ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದ್ದು, ಸರ್ಕಾರ ತಕ್ಷಣವೇ ಹೂಳು ತೆರವು ಕಾರ್ಯ ಕೈಗೊಳ್ಳಬೇಕು. ಇಲ್ಲವಾದರೆ ತುಂಗಭದ್ರ ಡ್ಯಾಂ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತುಂಗಭದ್ರ ರೈತ ಸಂಘದ ರಾಜ್ಯಾಧ್ಯಕ್ಷ ಜಿ. ಪುರುಷೋತ್ತಮ ಗೌಡ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರ ಡ್ಯಾಂನ ಇಂದಿನ ದುಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಟಿಬಿ ಬೋರ್ಡ್ನ ಸಂಪೂರ್ಣ ಮಾಹಿತಿ ಹೊಂದಿರುವ ನಿವೃತ್ತ ಅಧಿಕಾರಿ ಬಿ.ಎಸ್. ಹುದ್ಯಾಳ್ ಕೂಡ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಜಲಾಶಯದಲ್ಲಿ ಹೆಚ್ಚುತ್ತಿರುವ ಹೂಳು ನೀರು ಸಂಗ್ರಹ ಸಾಮರ್ಥ್ಯವನ್ನು ಹಾಳು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
2017ರಲ್ಲಿಯೇ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಈ ವಿಷಯ ಪ್ರಸ್ತಾಪಿಸಿ “ಹೂಳಿನ ಜಾತ್ರೆ” ಮೂಲಕ ಸರ್ಕಾರವನ್ನು ಎಚ್ಚರಿಸಲಾಗಿತ್ತು. ಆದರೆ ಇದುವರೆಗೆ ಸಮರ್ಪಕ ಕ್ರಮ ಕೈಗೊಳ್ಳದ ಪರಿಣಾಮ ಡ್ಯಾಂ ನೀರಿನ ಮಟ್ಟ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಟಿಬಿ ಬೋರ್ಡ್ನಲ್ಲಿ ಒಂದು ಅಡಿ ಎತ್ತರದ ಗೇಟ್ ನಿರ್ಮಾಣ ಮಾಡಿದರೂ ಜಲಾಶಯದ ನೀರು ಸಂಗ್ರಹ ಮಟ್ಟ ಹೆಚ್ಚಾಗಿಲ್ಲ. ಪ್ರಸ್ತುತ ಡ್ಯಾಂನ ನೀರು ಸಂಗ್ರಹ ಸಾಮರ್ಥ್ಯ ಕೇವಲ 102 ಅಡಿ ಮಟ್ಟಕ್ಕೆ ಸೀಮಿತವಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು. ಹೀಗಾಗಿ ತುರ್ತಾಗಿ ಹೂಳು ತೆರವು ಕಾರ್ಯ ಕೈಗೊಂಡು ಡ್ಯಾಂನ ಮೂಲ ಸಾಮರ್ಥ್ಯವನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಡ್ಯಾಂ ಹೊರವಲಯ ಹಾಗೂ ಹಿನ್ನೀರು ಪ್ರದೇಶಗಳಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸಬಾರದು. ಇದರಿಂದ ಜಲಾಶಯದಲ್ಲಿನ ಹೂಳು ಹೊರ ಹೋಗಲು ಸಹಕಾರವಾಗುತ್ತದೆ ಎಂದು ತಿಳಿಸಿದರು. ಈ ಮಹತ್ವದ ವಿಚಾರದಲ್ಲಿ ಪಕ್ಷಾತೀತವಾಗಿ ಎಲ್ಲಾ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಉದ್ಯಾಳ್, ದೊಡ್ಡ ದಾಸಪ್ಪ, ಕೊಂಚಗೇರಿ ರಾಜಗೌಡ, ವೀರಭದ್ರಗೌಡ, ಶ್ರೀಧರ್, ಧರೂರ್ ಬಸವರಾಜ್, ಗೋವಿಂದಪ್ಪ ಸೇರಿದಂತೆ ತುಂಗಭದ್ರ ರೈತ ಸಂಘದ ಹಲವು ಮುಖಂಡರು ಉಪಸ್ಥಿತರಿದ್ದರು.





