ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ರೈತರು ಕೃಷಿಗೆ ಸಂಭವಿಸಿದ ಸಾಲವನ್ನು ಪಡೆದುಕೊಂಡಿದ್ದು, ಬ್ಯಾಂಕಿನವರು ಅಸಲಿನ ಮೇಲೆ ಬಡ್ಡಿ, ಚಕ್ರಬಡ್ಡಿ, ಸುಸ್ತಿನ ಬಡ್ಡಿ ಸೇರಿದಂತೆ ಇತರೆ ಚಾರ್ಜ್ ಗಳು ಸೇರಿದರಿಂದ ಪಡೆದ ಸಾಲವು ಹತ್ತು ಪಟ್ಟು ಏರಿಕೆಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಹಾಗಾಗಿ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಓಟಿಎಸ್ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆರ್. ಮಾಧವರೆಡ್ಡಿ ಕರೂರು ಅವರು ಆಗ್ರಹಿಸಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ (ಎಸ್.ಬಿ.ಐ, ಕೆನರ ಬ್ಯಾಂಕ್, ಯೂನಿಯನ್ ಬ್ಯಾಂಕ್) ಪಡೆದ ಸಾಲದಲ್ಲಿ 10% ಪಾವತಿಸುವಂತಹ ರೈತಸ್ನೇಹಿ ಯೋಜನೆಯನ್ನು ಜಾರಿಗೊಳಿಸಿ ಮಾನವೀಯತೆಯನ್ನು ಮೆರೆದಿರುತ್ತಾರೆ ಆದರೆ ಈ ತರಹದ ಮಾನವೀಯತೆಯನ್ನು ತೋರದೆ ಸರಿಯಾದ ಓಟಿಎಸ್ ಸ್ವೀಂನ್ನು ಜಾರಿಗೊಳಿಸದೆ ರೈತರ ಮೇಲೆ ಸಾಲದ ಹೊರೆಯನ್ನು ಇನ್ನಷ್ಟು ಹೆಚ್ಚಿಸಿವುದರ ಜೊತೆಗೆ ರೈತರ ಮನೆಗಳಿಗೆ ಕೋರ್ಟಿನಿಂದ ನೋಟಿಸಗಳನ್ನು ನೀಡುವುದರ ಮೂಲಕ ರೈತರಲ್ಲಿ ಭಯದ ವಾತಾವರಣ ಸೃಷ್ಟಿಸಿರುತ್ತಾರೆ. ಇದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದಂತೆ ಆಗಿದೆ ಎಂದರು.
ಬ್ಯಾಂಕಿನ ಆಡಳಿತ ಮಂಡಳಿಯು ತೋರುತ್ತಿದ್ದ ಹಠವಾದಿ ಧೋರಣೆಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯು ರಾಜ್ಯಾದ್ಯಾಂತ 2 ವರ್ಷಗಳಲ್ಲಿ ರೈತ ಸಂಕಲ್ಪ ಯಾತ್ರೆ-ರೈತ ಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳುವುದರ ಜೊತೆಗೆ ಈ ಪ್ರಕರಣದಲ್ಲಿ ರಾಜ್ಯ ಸರ್ಕಾರವು ಮಧ್ಯ ಪ್ರವೇಶ ಮಾಡಿ ರೈತರ ನೆರವಿಗೆ ಧಾವಿಸುವಂತೆ ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ ಆರ್ ಪಾಟೀಲ್ ಇವರಲ್ಲಿ ಸಂಘಟನೆಯು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಬ್ಯಾಂಕರ್ ಕಮಿಟಿಯೊಂದಿಗೆ ಸಭೆ ನಡೆಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನವರು ರೈತರ ಸಾಲ ವಸೂಲಾತಿಯ ವಿಷಯದ ಬಗ್ಗೆ ಇಲ್ಲಿಯವರೆಗೆ ಕೈಗೊಂಡ ಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಚಾಗನೂರು ಮಲ್ಲಿಕಾರ್ಜುನ, ಲೇಪಾಕ್ಷಿ, ಶ್ರೀಶೈಲ ಆಲದಳ್ಳಿ, ಬಸವರಾಜ್ ಸ್ವಾಮಿ, ಪಂಪನಗೌಡ, ಸುರೇಂದ್ರ, ವಿಶ್ವನಾಥ, ಅಬ್ದುಲ್ ಸೇರಿದಂತೆ ಇತರರು ಹಾಜರಿದ್ದರು.





