ಬೆಳಗಾಯಿತು ವಾರ್ತೆ
ಕೊಟ್ಟೂರು: ಬಿ.ಜೆ.ಪಿ. ಟಿಕೆಟ್ ಕೊಡಿಸುತ್ತೇನೆಂದು ರಾಜ್ಯದಲ್ಲಿ ಹೆಸರು ಮಾಡಿದ್ದ ಚೈತ್ರಾ ಕುಂದಾಪುರ ರವರ ಕೇಸ್ ದಾಖಲಿಸಿದ ಬೆನ್ನಲ್ಲೇ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಬಿ.ಜೆ.ಪಿ. ಟಿಕೆಟ್ ಕೊಡಿಸುತ್ತೇನೆಂದು ವಂಚಿಸಿರುವ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರವಾಗಿದ್ದು, ಈ ಕ್ಷೇತ್ರಕ್ಕೆ ಬಿ.ಜೆ.ಪಿ. ಟಿಕೆಟ್ ಕೊಡಿಸುತ್ತೇನೆಂದು 2 ಕೋಟಿ 3 ಲಕ್ಷ ರೂ. ವಂಚನೆ ಪ್ರಕರಣ ದಾಖಲಾಗಿದೆ.
ಚಲವಾದಿ ಜನಾಂಗಕ್ಕೆ ಸೇರಿದ ಸಿ.ಶಿವಮೂರ್ತಿ ರವರಿಗೆ ಟಿಕೆಟ್ ಕೊಡಿಸುತ್ತೇನೆಂದು ಕೊಟ್ಟೂರು ತಾಲ್ಲೂಕು ಬೆನಕನಹಳ್ಳಿ ಗ್ರಾಮದ ಬಿ.ಜೆ.ಪಿ. ಮುಖಂಡ ರೇವಣಸಿದ್ದಪ್ಪರವರು ತಮಗೆ ಬಿ.ಜೆ.ಪಿ. ಪಕ್ಷದ ಹಿರಿಯ ಮುಖಂಡರುಗಳ ಪರಿಚಯ ಇದೆ ಎಂದು ಹೇಳಿ ಬಿಜೆಪಿ ಮುಖಂಡರ ಜೊತೆಗಿರುವ ಫೋಟೋಗಳನ್ನು ತೋರಿಸಿ ೨೦೨೩ರ ವಿಧಾನಸಭೆ ಚುನಾವಣೆಗೆ ಹಗರಿಬೊಮ್ಮನಹಳ್ಳಿ ಬಿ.ಜೆ.ಪಿ. ಟಿಕೇಟ್ ಕೊಡಿಸುತ್ತೇನೆ ನೀವು ಟಿಕೆಟ್ ಪಡೆಯಲು ಯೋಗ್ಯರು ಎಂದು ಹೇಳಿ ನಂಬಿಸಿ, ಬೆಂಗಳೂರಿಗೆ ಕರೆದುಕೊಂಡು ಹೋಗಿ ಹೋಟೆಲ್ ಒಂದರಲ್ಲಿ ಪುತ್ತೂರಿನ ಇನ್ನೊಬ್ಬ ಬಿಜೆಪಿ ಮುಖಂಡರಾದ ಎನ್.ಪಿ.ಶೇಖರ್ರವರನ್ನು ಪರಿಚಯಿಸಿದ್ದು ಇವರಿಬ್ಬರೂ ಸೇರಿ ಶಿವಮೂರ್ತಿ ಅವರನ್ನು ನಂಬಿಸಿ, ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಒಟ್ಟು ಎರಡು ಕೋಟಿ ಮೂರು ಲಕ್ಷ ರೂ.ಗಳನ್ನು ಪಡೆದಿದ್ದು, ಟಿಕೆಟ್ ಕೊಡಿಸದೇ ವಂಚನೆ ಎಸಗಿದ್ದಾರೆ.
ಹಣ ವಾಪಸ್ಸು ಕೇಳಿದರೆ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕೊಟ್ಟ ದೂರಿನ ಮೇರೆಗೆ ಕೊಟ್ಟೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನುಮುಂದೆ ಜನನಾಯಕರು ಅರಮನೆಯಲ್ಲಿ ಹುಟ್ಟುವುದಿಲ್ಲ, ಗುಡಿಸಲಿನಿಂದ ಹುಟ್ಟುತ್ತಾರೆ ಎಂದು ಹೇಳಿ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ಕೊಟ್ಟ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ರವರ ಆಶಯಗಳು ಮಣ್ಣುಪಾಲಾಗುತ್ತಿರುವುದು ಈ ನೆಲದ ದೌರ್ಭಾಗ್ಯವೇ ಸರಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕೋಟಿಗಟ್ಟಲೇ ಹಣ ಕೊಟ್ಟು ಆಯ್ಕೆಯಾಗುವ ಜನಪ್ರತಿನಿಧಿಗಳು ಮತ್ತೇ ಅದನ್ನು ವಾಪಾಸ್ಸು ಪಡೆಯದೇ ಬಿಡುತ್ತಾರೆಯೇ? ಇಂದಿನ ದಿನಮಾನಗಳಲ್ಲಿ ರಾಜಕೀಯವೆನ್ನುವುದು ಜನರ ಸೇವೆಗಾಗಿ ಉಳಿದಿಲ್ಲ ಅದೊಂದು ವ್ಯಾಪಾರೀಕರಣವಾಗುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಕೊಡಲಿ ಪೆಟ್ಟು ಹಾಕುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನವಲ್ಲದೇ ಇನ್ನೇನು?
ಪ್ರತಿಕ್ರಿಯೆ
ಶಿವಮೂರ್ತಿ ಇವರಿಂದ ಸಿಎಂ, ಗೃಹ ಸಚಿವರಿಗೆ ಪತ್ರ
ಹಣ ಕಳೆದುಕೊಂಡ ಶಿವಮೂರ್ತಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ಗೆ ಪತ್ರ ಬರೆದು ಮನವಿ ಮಾಡಿದ್ದರು. ತಮಗೆ ವಂಚನೆ ಮಾಡಿದವರ ಬಗ್ಗೆ ಸಂಪೂರ್ಣ ವಿವರವನ್ನು ಹಾಕಿ, ಮೋಸ ಮಾಡಿದವರ ಮೇಲೆ ಕ್ರಮ ಕೈಗೊಂಡು ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಕೋರಿದ್ದಾರೆ.
- ಶಿವಮೂರ್ತಿ ವಂಚನೆಗೊಳಗಾದ ವ್ಯಕ್ತಿ