ಬೆಳಗಾಯಿತು ವಾರ್ತೆ | Www.belagayithu.in
ಮರಿಯಮ್ಮನಹಳ್ಳಿ: ಮಾಜಿ ಶಾಸಕರಿಗೆ ಆಣೆಪ್ರಮಾಣಗಳು ಲೆಕ್ಕಕ್ಕಿಲ್ಲ, ಸೋಲಿನ ಹತಾಷೆಯಲ್ಲಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹ.ಬೊ.ಹಳ್ಳಿ ಶಾಸಕ ನೇಮಿರಾಜ್ ನಾಯ್ಕ್ ಆರೋಪಿಸಿದರು.
ಅವರು ಪಟ್ಟಣಕ್ಕೆ ಸಮೀಪದ ಜಿ. ನಾಗಲಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನನ್ನ ಕಾಲಾವಧಿಯ ದೋಷಾರೋಪಗಳ ಕುರಿತು ಸಾಕ್ಷ್ಯಗಳಿದ್ದಲ್ಲಿ ದಾಖಲೆ ಸಮೇತ ಸಾಬೀತುಪಡಿಸಲಿ, ಪ್ರಸ್ತುತ ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದ್ದು, ಇಲ್ಲಸಲ್ಲದ ಆರೋಪಗಳಿಗೆ ಕಿವಿಕೊಡುವುದಿಲ್ಲ ಎಂದರು. ಕೆಎಮ್ಆರ್ಸಿ, ಡಿಎಂಎಫ್ ಹಾಗೂ ಕೆಕೆಆರ್ಡಿಸಿ ಯೋಜನೆ ಅಡಿಯಲ್ಲಿ 8ಕೋಟಿ ರೂ.ಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಮರಿಯಮ್ಮನಹಳ್ಳಿ ಹೋಬಳಿಯಾದ್ಯಂತ ಗ್ರಾಮಗಳಿಗೆ 140 ಕೋಟಿ ರೂ.ಗಳ ಸಿಸಿ ರಸ್ತೆ ನಿರ್ಮಿಸಲಾಗುವುದು ಎಂದು ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು, ಜಿ ನಾಗಲಾಪುರ ಗ್ರಾಮದ ಜನತೆಗೆ ಮೃತ್ಯುಕೂಪವಾಗಿದ್ದ ಹಾಗೂ ಬಹು ವರ್ಷಗಳ ಬೇಡಿಕೆಯಾಗಿದ್ದ ಹಳ್ಳದ ಸೇತುವೆ ನಿರ್ಮಾಣಕ್ಕೆ 2.25 ಲಕ್ಷ ರೂ.ಗಳ ಕಾಮಗಾರಿಯನ್ನು ಹಾಗೂ ನಾಗಲಾಪುರದಿಂದ ಗುಂಡಾ ಗ್ರಾಮಕ್ಕೆ ಸಂಪರ್ಕ ರಸ್ತೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಪಟ್ಟಣದ ಎಪಿಎಂಸಿಯಲ್ಲಿ ನೂತನವಾಗಿ ಅತಿಥಿ ಗೃಹ ನಿರ್ಮಾಣಕ್ಕೆ 50 ಲಕ್ಷ ಅನುದಾನ ನೀಡಲಾಗಿದೆ ಎಂದರು. ಪಟ್ಟಣದಾದ್ಯಂತ ಇರುವ ಎಲ್ಲಾ ಶಾಲೆಗಳ ಕಟ್ಟಡ ದುರಸ್ತಿಗೆ 8 ಕೋಟಿ ರೂ.ಗಳ ಅನುದಾನ ನೀಡಲಾಗಿದೆ ಎಂದರು.
ಪಟ್ಟಣದ ಜ್ವಲಂತ ಸಮಸ್ಯೆಯಾದ ಕುಡಿಯುವ ನೀರಿನ ಕುರಿತಾಗಿ ಮಾತನಾಡಿ, ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಜಾಕ್ ವಾಲ್ನ ಸ್ಥಳಕ್ಕೆ ಶೀಘ್ರದಲ್ಲಿ ಭೇಟಿ ನೀಡಿ ಕುಡಿಯುವ ನೀರನ್ನು ಪಟ್ಟಣಕ್ಕೆ ಪೂರೈಸಲಾಗುವುದು ಎಂದರು.
ಚಾಲನೆ: ಹೋಬಳಿಯ ತಾಳೆ ಬಸಾಪುರ ತಾಂಡ, ಚಿಲಕನಹಟ್ಟಿ, ಹಾರುವನ ಹಳ್ಳಿ, ಪೋತಲಕಟ್ಟಿ, ತಿಮ್ಮಲಾಪುರ, ಜಿ.ನಾಗಲಾಪುರ, ನಾಗಲಾಪುರ ತಾಂಡ, ಗುಂಡಾ, ಗುಂಡಾ ತಾಂಡ, ಹನುಮನಹಳ್ಳಿ, ಇಂದಿರಾನಗರ ಗ್ರಾಮಗಳಲ್ಲಿ ತಲಾ 50 ಲಕ್ಷ ರೂ.ಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ನಾಗಲಾಪುರ ಗ್ರಾಮದ ಒಪ್ಪತ್ತೇಶ್ವರ ಮಠದ ಶ್ರೀ ನಿರಂಜನ ಪ್ರಭು ಮಹಾಸ್ವಾಮಿಗಳು, ಸ್ಥಳೀಯ ಮುಖಂಡರುಗಳಾದ ಓಬಜ್ಜ, ರಾಜಪ್ಪ, ಪೋತಲಕಟ್ಟಿ ನಾಗರಾಜ, ಗಾಂಜಿ ರಮೇಶ್, ಪಕ್ಕೀರಪ್ಪ, ನಾರಾಯಣ ನಾಯ್ಕ್, ಪ್ರಕಾಶ, ಸೋಮ್ಲ ನಾಯ್ಕ್ ಹಾಗೂ ಇತರರಿದ್ದರು.





