ಬೆಳಗಾಯಿತು ವಾರ್ತೆ | www.belagaithu.in
ಬೆಂಗಳೂರು: ದೇಶದಲ್ಲಿ ಇಸಿಸ್ ಕಾರ್ಯಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಬಳ್ಳಾರಿ ಮಾಡ್ಯೂಲ್ ಪ್ರಕರಣದ 7 ಮಂದಿ ಶಂಕಿತರ ವಿರುದ್ಧ ಎನ್ಐಎ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.
ಸುಲೈಮಾನ್ ಅಲಿಯಾಸ್ ಮಿನಾಜ್, ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀರ್ ಎಂ.ಡಿ.ಮಜಾಮಿಲ್, ಮಹಾರಾಷ್ಟ್ರದ ಅನಾಸ್ ಇಕ್ಬಾಲ್ ಶೇಖ್ ಮೊಹಮ್ಮದ್, ಜಾರ್ಖಂಡ್ನ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಹಾಗೂ ದೆಹಲಿಯ ಶಯಾನ್ ರೆಹಮಾನ್ ಅಲಿಯಾಸ್ ಹುಸೇನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ.
ಐಸಿಸ್ ಪ್ರತ್ಯೇಕತಾವಾದಿ ಮತ್ತು ಹಿಂಸಾತ್ಮಕ ಸಿದ್ಧಾಂತದಿಂದ ಪ್ರೇರಿತರಾಗಿದ್ದ ಆರೋಪಿಗಳು 2025ರ ವೇಳೆಗೆ ದೇಶದ ಪ್ರತೀ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್ ಸಿದ್ಧಪಡಿಸುವ ಗುರಿ ಹೊಂದಿದ್ದರು. ಭಾರತೀಯ ಸೈನಿಕರು, ಪೊಲೀಸರು, ನಿರ್ದಿಷ್ಟ ಧಾರ್ಮಿಕ ಮುಖಂಡರ ಮೇಲೆ ದಾಳಿ ನಡೆಸಲು ಚಿಂತನೆ ನಡೆಸಿದ್ದರು.
ಬಳ್ಳಾರಿಯಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಇನ್ನು ಭಾರತ ಸರ್ಕಾರದ ವಿರುದ್ಧ ಜಿಹಾದ್, ಸ್ಫೋಟಗಳನ್ನು ನಡೆಸಲು ಸಿದ್ಧವಾಗಿದ್ದರು. ಜಿಹಾದ್ ಸಂಬಂಧಿತ ಡಿಜಿಟಲ್ ದಾಖಲೆಗಳು ಅಥವಾ ಡೇಟಾವನ್ನು ಇತರೆ ಯುವಕರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಅಷ್ಟೇ ಅಲ್ಲ ಸುಧಾರಿತ ಸ್ಫೋಟಕ ಸಾಧನಗಳ ಮೂಲಕ ದಾಳಿ ನಡೆಸುವುದು, ಬಳ್ಳಾರಿಯನ್ನು ಉಗ್ರ ಸಂಘಟನೆಯ ಜಾಲದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು, ಇಲ್ಲಿಯೇ ಪ್ರಾಯೋಗಿಕವಾಗಿ ಸ್ಫೋಟಿಸುವುದು ಸೇರಿ ಹಲವು ಕುತಂತ್ರಗಳನ್ನು ಹೆಣೆದಿದ್ದರು.
ಧಾರ್ಮಿಕ ಮುಖಂಡರು, ದೇಶದ ಯೋಧರು, ಪೊಲೀಸರು ಸೇರಿ ಹಲವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದುಬಂದಿದೆ. ಇವರ ಬಳಿಯಿಂದ ಹಲವು ಡಿವೈಸ್ಗಳ ಜತೆಗೆ ಜಿಹಾದ್ ಕುರಿತ ಪುಸ್ತಕಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಹೇಳಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.





