ಬೆಳಗಾಯಿತು ವಾರ್ತೆ | www.belagayithu.in
ಹಂಪಿ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿಯಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ ಮೆರೆಯಿತು. ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಜೋಡಿ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಸಾಗರವೇ ನಿರ್ಮಾಣವಾಯಿತು.
ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಚಂದ್ರಮೌಳೇಶ್ವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ದೊಡ್ಡ ರಥವನ್ನು ಭಕ್ತರು ಭಕ್ತಿಭಾವದಿಂದ ಎಳೆದರು. ಬಳಿಕ ವಿದ್ಯಾರಣ್ಯ ಭಾರತಿ ಸ್ವಾಮಿಗಳಿರುವ ಚಿಕ್ಕ ರಥವನ್ನೂ ಭಕ್ತರು ಎಳೆದು ಸಂಭ್ರಮಿಸಿದರು.
ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಂಡು ಧಾರ್ಮಿಕ ಉತ್ಸಾಹ ಮೆರೆದರು. ರಥೋತ್ಸವಕ್ಕೂ ಮೊದಲು ರಥದ ಬಾವುಟಗಳ ಹರಾಜು ಕೂಡ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಸ್ಥಳೀಯರು ಭವ್ಯ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ವ್ಯವಸ್ಥೆ ಮಾಡಲಾಗಿದೆ. 13 ಕ್ವಿಂಟಲ್ ಅನ್ನ, ತಲಾ ಸಾಂಬಾರ್, ಗೋಧಿ ಹುಗ್ಗಿ, ಬದನೇಕಾಯಿ ಪಲ್ಯ ಹಾಗೂ ಚಿತ್ರಾನ್ನವನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಯಿತು.
ಸುಮಾರು 22 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದ್ದು, ಹಂಪಿಯ ಜಾತ್ರೆ ಮಹೋತ್ಸವಕ್ಕೆ ವಿಶ್ವವಿಖ್ಯಾತಿ ಮತ್ತಷ್ಟು ಮೆರಗು ತಂದಿದೆ.





