ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ವಿಶ್ವ ಜಲ ದಿನಾಚರಣೆ ಅಂಗವಾಗಿ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಲ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಹೊಸಮನೆ ಅವರು, “ನೀರನ್ನು ಮಿತವಾಗಿ ಬಳಸಿ, ಅನಾವಶ್ಯಕವಾಗಿ ದುರುಪಯೋಗ ಮಾಡಬಾರದು. ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಹ್ಲಾದ ಚೌದ್ರಿ ಅವರು ಸಹ ಮಾತನಾಡಿ, ನೀರಿನ ಮಹತ್ವ ಹಾಗೂ ಅದರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಬಿ.ಎ ಹಾಗೂ ಬಿ.ಕಾಂ ವಿದ್ಯಾರ್ಥಿನಿಯರಿಂದ ರಂಗೋಲಿ ಸ್ಪರ್ಧೆ ನಡೆಯಿತು. ಚೈತ್ರ ಕೆ, ಅಂಕಿತ, ಮಧು, ಉಮಾಭಾರತಿ, ವಿ. ಸೋನಿಯಾ, ದೀಪ ಕೆ, ಶೀರಿಶಾ ಗಣಿ, ಶೃತಿ ಸೇರಿದಂತೆ ಅನೇಕರು ಭಾಗವಹಿಸಿದರು. ಸ್ಪರ್ಧೆಯಲ್ಲಿ ರಕ್ಷಿತಾ ಜುಬೀನಾ ಪ್ರಥಮ ಸ್ಥಾನ, ಗೀತಾ ಕಲಾವತಿ ದ್ವಿತೀಯ ಸ್ಥಾನ ಹಾಗೂ ಉಮಾಭಾರತಿ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ ಮಹಮ್ಮದ್ ಹ್ಯಾರಿಸ್ ಸುಮೈರ್, ಮುಖ್ಯ ಯೋಜನಾಧಿಕಾರಿ ವಾಗೀಶ್ ಸೇರಿದಂತೆ ಇತರರು ಹಾಜರಿದ್ದರು.
ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಬಸಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕನ್ನಡ ವಿಭಾಗದ ಗಿರಿರಾಜಪ್ಪ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರವೀಣ್ ಕುಮಾರ್ ಎಂ.ಎನ್. ಸ್ವಾಗತಿಸಿದರು. ವಿದ್ಯಾರ್ಥಿನಿ ಜ್ಯೋತಿ ಹೆಚ್ ಪ್ರಾರ್ಥನೆ ಸಲ್ಲಿಸಿದರು





