ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಸಮಾಜ ಸೇವೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಉದ್ದೇಶವಿಟ್ಟು ಬಳ್ಳಾರಿ ನಗರದ ಬ್ಯಾಂಕ್ ಕಾಲೋನಿಯ ಶಾಸ್ತ್ರಿ ನಗರದಲ್ಲಿ ನೂತನವಾಗಿ “ತುಂಗಭದ್ರಾ ಗ್ರಾಮೀಣ ಬ್ಯಾಂಕ್ ಕೇರ್ಸ್ ಫೌಂಡೇಶನ್” ಅನ್ನು ಮೇ ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಫೌಂಡೇಶನ್ ಸದಸ್ಯರು ತಿಳಿಸಿದ್ದಾರೆ.
ಈ ಫೌಂಡೇಶನ್ ಮೂಲಕ ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ವಿವಿಧ ರೀತಿಯ ನೆರವು ಒದಗಿಸುವ ಯೋಜನೆ ರೂಪಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವುದು, ರಸ್ತೆ ಹಾಗೂ ಪಾರ್ಕ್ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು, ಬಡವರಿಗೆ ಆರ್ಥಿಕ ಸಹಾಯ ನೀಡುವುದು, ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಪುಸ್ತಕಗಳು, ಪೆನ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಿತರಿಸುವುದು ಫೌಂಡೇಶನ್ನ ಮುಖ್ಯ ಉದ್ದೇಶಗಳಾಗಿವೆ.
ಈ ಸೇವಾ ಚಟುವಟಿಕೆಗಳಲ್ಲಿ ಡಾ. ಸಾಯಿನಾಥ್, ಡಾ. ಲಕ್ಷ್ಮಿಕಾಂತ್ ರೆಡ್ಡಿ ಕೆ, ಭರತ್, ಯೋಜನ್, ಭೂವನ್, ಸುಜೀತ್, ಅಮೋಘ, ಶಿವಮಣಿ, ನವೀನ್, ಪ್ರವೀಣ್, ಸಾಥ್ವೀಕ್, ಅನುಷಾ, ಸ್ನೇಹಾ, ಬಿಂದು ಸೇರಿದಂತೆ ಹಲವರು ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಫೌಂಡೇಶನ್ ಉದ್ಘಾಟನಾ ಕಾರ್ಯಕ್ರಮಕ್ಕೆ ನಗರ ಶಾಸಕ ಭರತ್ ರೆಡ್ಡಿ, ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಸಮಾಜಮುಖಿ ಕಾರ್ಯಗಳ ಮೂಲಕ ಜನರಿಗೆ ನೆರವಾಗುವ ಉದ್ದೇಶದಿಂದ ಈ ಫೌಂಡೇಶನ್ ಆರಂಭವಾಗುತ್ತಿರುವುದು ಗಮನಾರ್ಹವಾಗಿದೆ.






