ಬೆಳಗಾಯಿತು ವಾರ್ತೆ | http://www.belagayithu.in
ಬಳ್ಳಾರಿ: ಹೋಟೆಲ್ ಉದ್ಯಮವು ಎದುರಿಸುತ್ತಿರುವ ಎಲ್ಪಿಜಿ ಸಿಲಿಂಡರ್ ಸರಬರಾಜಿನ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಹೋಟಲ್ ಮತ್ತು ಬೇಕರಿ ಮಾಲೀಕರ ಅಸೋಸಿಯೇಷನ್ ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿಗಳಾದ, ಕೆ.ಸಿ. ಸುರೇಶಬಾಬು ಅವರ ನೇತೃತ್ವದಲ್ಲಿ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ವಿಕ್ರಂಪೋಲ ಅವರ ತಂಡವು ಅಪರ ಜಿಲ್ಲಾಧಿಕಾರಿಗಳಾದ ಎನ್. ಮೊಹಮ್ಮದ್ ಜುಬೈರ್ ಅವರನ್ನು ಭೇಟಿ ಮಾಡಿ, ಹೋಟಲ್ ಮತ್ತು ಬೇಕರಿ ಉದ್ಯಮಕ್ಕೆ ಹೆಚ್ಚಿನ ಸಿಲೆಂಡರ್ಗಳನ್ನು ಪೂರೈಸಬೇಕು ಎಂದು ಅವರು ಮನವಿ ಮಾಡಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿಯ ಯುದ್ಧದ ವಾತಾವರಣದ ಕಾರಣ ಎಲ್ಪಿಜಿ ಸಿಲೆಂಡರಗಳ ಪೂರೈಕೆಯಲ್ಲಿ ಹೋಟಲ್ ಮತ್ತು ಬೇಕರಿ ಉದ್ಯಮಕ್ಕೆ ಧಕ್ಕೆ ಆಗುತ್ತಿದೆ. ಅಲ್ಲದೇ, ಈ ಉದ್ಯಮದಲ್ಲಿಯ ಉದ್ಯೋಗಿಗಳ ಬದುಕಿಗೆ ಕುತ್ತು ಬೀಳುತ್ತಿದೆ. ಕಾರಣ ಸರ್ಕಾರ ಸಿಲೆಂಡರ್ಗಳ ಪೂರೈಕೆಯಲ್ಲಿ ವಿಶೇಷ ಆಸಕ್ತಿ ತೋರಿಸಬೇಕು ಎಂದು ಕೋರಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ, ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ ಸೇರಿ ಹೋಟೆಲ್ ಮತ್ತು ಬೇಕರಿ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಪಾರಜಿಲ್ಲಾಧಿಕಾರಿ, ಮೊಹಮ್ಮದ್ ಜುಬೈರ್. ಎನ್ ಅವರು, ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.





