ಬೆಳಗಾಯಿತು ವಾರ್ತೆ| www.belagayithu.in
ಮರಿಯಮ್ಮನಹಳ್ಳಿ: 2026ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮರಿಯಮ್ಮನಹಳ್ಳಿಯ ವಿದ್ಯಾರ್ಥಿನಿ ಶ್ರಾವಣಿ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಬಳ್ಳಾರಿ “ಬೆಳಗಾಯಿತು” ಪತ್ರಿಕೆಯ ಹಿರಿಯ ವರದಿಗಾರರಾದ ಜಿ.ವಿ. ಸುಬ್ಬರಾವ್ ಅವರ ಪುತ್ರಿಯಾಗಿರುವ ಶ್ರಾವಣಿ, ಹೊಸಪೇಟೆಯ ನ್ಯಾಷನಲ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಲ್ಲಿ 583 ಅಂಕಗಳನ್ನು ಪಡೆದು (97.17%) ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆ ತಂದೆ-ತಾಯಿ ಹಾಗೂ ಕಾಲೇಜಿಗೆ ಕೀರ್ತಿ ತಂದಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರಾವಣಿ, “ನನ್ನ ಈ ಸಾಧನೆಗೆ ನನ್ನ ತಂದೆ-ತಾಯಿ ಮುಖ್ಯ ಕಾರಣ. ಅವರು ನನ್ನ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಎಲ್ಲಾ ರೀತಿಯ ಸಹಾಯವನ್ನು ನೀಡಿದ್ದು, ಸದಾ ಓದಲು ಪ್ರೇರೇಪಿಸಿದರು. ನಾನು ಪ್ರತಿದಿನ 2ರಿಂದ 3 ಗಂಟೆಗಳ ಕಾಲ ನಿಯಮಿತವಾಗಿ ಓದುತ್ತಿದ್ದೆ. ಓದಿದ ವಿಷಯಗಳನ್ನು ಪುನರಾವರ್ತನೆ ಮಾಡಿಕೊಳ್ಳುವುದರ ಜೊತೆಗೆ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುತ್ತಿದ್ದೆ. ಇದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ.
ಶ್ರಾವಣಿ ಅವರು ಕನ್ನಡದಲ್ಲಿ 97, ಇಂಗ್ಲಿಷ್ನಲ್ಲಿ 91, ಅರ್ಥಶಾಸ್ತ್ರದಲ್ಲಿ 95, ವ್ಯವಹಾರ ಅಧ್ಯಯನದಲ್ಲಿ 100, ಲೆಕ್ಕಶಾಸ್ತ್ರದಲ್ಲಿ 100 ಹಾಗೂ ಸಂಖ್ಯಾಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದು ಎಲ್ಲಾ ವಿಷಯಗಳಲ್ಲಿಯೂ ಮೆಚ್ಚುವಂತಹ ಪ್ರದರ್ಶನ ನೀಡಿದ್ದಾರೆ.
ತಂದೆಯಾದ ಜಿ.ವಿ. ಸುಬ್ಬರಾವ್ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, “ಮಗಳ ಪರಿಶ್ರಮ ಹಾಗೂ ಶಿಸ್ತು ಈ ಸಾಧನೆಗೆ ಕಾರಣ. ಅವಳು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಗುರಿಗಳನ್ನು ಸಾಧಿಸಲಿ” ಎಂದು ಆಶಿಸಿದ್ದಾರೆ.
ಶ್ರಾವಣಿಯ ಈ ಸಾಧನೆ ಮರಿಯಮ್ಮನಹಳ್ಳಿ ಭಾಗದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಶಿಕ್ಷಣದ ಮೂಲಕ ಉನ್ನತ ಸಾಧನೆ ಸಾಧ್ಯವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.





