ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ತಾಲ್ಲೂಕಿನ ರೂಪನಗೂಡಿ ಗ್ರಾಮದಲ್ಲಿ ಆರಾಧ್ಯದೈವ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ಶನಿವಾರ ಹಾಗೂ ವೈಕುಂಠ ಏಕಾದಶಿ ಸಂದರ್ಭಗಳಲ್ಲಿ ನಡೆಯುವ ವಿಶೇಷ ಪೂಜೆಗಳ ಜೊತೆಗೆ ಬುದ್ಧ ಪೂರ್ಣಿಮಿ ಹಾಗೂ ಜಾತ್ರೆಯ ಅಂಗವಾಗಿ ಈ ಬಾರಿ ವಿಶೇಷ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಬೆಳಿಗ್ಗಿನ ಜಾವ ಗಂಗಾಜಲವನ್ನು ತಂದು ಮೂರ್ತಿಗಳಿಗೆ ಪುರೋಹಿತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತರು ಸರತಿ ಸಾಲಿನಲ್ಲಿ ನಿಂತು ಹೂವು, ತೆಂಗಿನಕಾಯಿ ನೈವೇದ್ಯ ಸಮರ್ಪಿಸಿ ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದರು.
ಸಂಜೆ ವೇಳೆ ಅಲಂಕೃತ ರಥೋತ್ಸವ ಜರುಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡರು. ಭಕ್ತರು ರಥಕ್ಕೆ ಹೂವು ಹಾಗೂ ಬಾಳೆಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿಯನ್ನು ಸಲ್ಲಿಸಿದರು. ಬಳಿಕ ತೇರು ಬೀದಿಗಳಲ್ಲಿ ರಥವನ್ನು ಎಳೆದು ಮರುಸ್ಥಳಕ್ಕೆ ತರಲಾಯಿತು.
ಕಾರ್ಯಕ್ರಮದ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಿಡಿ ಹಳ್ಳಿ ಪೊಲೀಸ್ ಠಾಣೆ ವತಿಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.





