ಬೆಳಗಾಯಿತು ವಾರ್ತೆ | Www.belagayithu.in
ಬಳ್ಳಾರಿ/ದುಬೈ: ದುಬೈನಿಂದ ವಿಡಿಯೋ ಬಿಡುಗಡೆ ಮಾಡಿರುವ ಶಾಸಕ ಭರತ್ ರೆಡ್ಡಿ ಅವರು, ತಾವು ಸುರಕ್ಷಿತ, ತಮ್ಮವರೂ ಸುರಕ್ಷಿತವೆಂದು ಸಂದೇಶ ಕಳುಹಿಸಿದ್ದಾರೆ.
ವಿಡಿಯೋ ಮಾಡಿ ಹಂಚಿಕೊಂಡಿರುವ ಶಾಸಕ ಭರತ್ ರೆಡ್ಡಿ, ಎಲ್ಲರಿಗೂ ನಮಸ್ಕಾರ. ಯುದ್ಧ ಭೂಮಿಯಲ್ಲಿ ಸಿಲುಕಿದ ಬಗ್ಗೆ ಕಳೆದ ಎರಡು ದಿನದಿಂದ ನನಗೆ ಸಾವಿರಾರು ಸಂಖ್ಯೆಯಲ್ಲಿ ನನ್ನ ಸ್ನೇಹಿತರು, ಹಿತೈಷಿಗಳು ಎಲ್ಲರೂ ಕರೆಗಳನ್ನು ಮಾಡಿ ಯಾವ ರೀತಿ ಸುರಕ್ಷಿತವಾಗಿದ್ದೀರಾ? ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ನಾನು ಎಲ್ಲರಿಗೂ ಹೇಳಲು ಇಚ್ಛೆ ಪಡುತ್ತೇನೆ, ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ನಾನು ಸುರಕ್ಷಿತವಾಗಿ ಇದ್ದೀನಿ, ತಮ್ಮ ಕುಟುಂಬಸ್ಥರೂ ಸುರಕ್ಷಿತವಾಗಿದ್ದಾರೆ. ಅಲ್ಲದೇ ಬಳ್ಳಾರಿಯಿಂದ 35 ಜನ ದುಬೈ ಪ್ರವಾಸಕ್ಕೆ ಬಂದಿದ್ದರು. ಅವರೆಲ್ಲರೂ ನಮ್ಮ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿದ್ದಾರೆ. ಅವರಿಗೆ ಏನು ವ್ಯವಸ್ಥೆ ಬೇಕು ಎಲ್ಲವನ್ನು ಮಾಡಿದ್ದೇವೆ. ಜತೆಗೆ ದುಬೈ ಅಲ್ಲಿ ಇರುವ ನಮ್ಮ ಇಬ್ಬರು ಸಿಬ್ಬಂದಿಗಳನ್ನು ಅವರ ಜತೆ ಮಾತನಾಡಲು ಕಳುಹಿಸಿಕೊಟ್ಟಿದ್ದೇವೆ. ಜತೆಗೆ ಕರ್ನಾಟಕ ಸರ್ಕಾರ ಬಳ್ಳಾರಿಯ 35 ಜನರ ಲಿಸ್ಟ್ನ್ನು ರಾಯಭಾರಿಗೆ ಕಳುಹಿಸಿದೆ. ಅತೀ ಶೀಘ್ರದಲ್ಲಿ ವಿಮಾನ ನಿಲ್ದಾಣ ಸಾರ್ವಜನಿಕರಿಗೆ ಮುಕ್ತವಾದ ತಕ್ಷಣ ನಮ್ಮ ಜಿಲ್ಲೆಯ ಜನರನ್ನು ರಾಜ್ಯಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.





