ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಜಿಲ್ಲೆಯ ಕೊಳಗಲ್ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು 30 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಕೊಳಗಲ್ಲು ಗ್ರಾಮದಲ್ಲಿ ಸಂತ ಎರ್ರಿತಾತ ದೇವಾಲಯವಿದೆ. ಎರ್ರಿ ತಾತ ಅವರ ಶಿಷ್ಯ ಎರ್ರೆಪ್ಪ ತಾತಾ ಅವರು ಕೆಲ ವರ್ಷದ ಹಿಂದೆ ನಿಧನರಾಗಿದ್ದರು. ಅವರ ಹೆಸರಲ್ಲೂ ದೇವಾಲಯದ ಆವರಣದಲ್ಲಿ ಸಣ್ಣದೊಂದು ಗುಡಿ ನಿರ್ಮಿಸಲಾಗಿದೆ. ಈ ಗುಡಿಯಲ್ಲಿ ಎರ್ರೆಪ್ಪ ತಾತ ಅವರ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಕೊಳಗಲ್ಲು ಗ್ರಾಮದಲ್ಲಿ ಹಲವು ತಿಂಗಳಿಂದ ಸಣ್ಣಪುಟ್ಟ ಘರ್ಷಣೆಗಳು ನಡೆದೇ ಇದ್ದವು. ಈ ಮಧ್ಯೆ ದೇವಾಲಯದಲ್ಲಿ ಎರ್ರೆಪ್ಪ ತಾತ ಮೂರ್ತಿಯನ್ನು ಗ್ರಾಮಸ್ಥರು ಪ್ರತಿಷ್ಠಾಪಿಸಿದ್ದರಾದರೂ, ಇದರ ವಿರುದ್ಧ ಸಮುದಾಯವೊಂದು ಕೋರ್ಟ್ ಮೆಟ್ಟಿಲೇರಿತ್ತು.
ಗುಡಿಯಿಂದ ಎರ್ರೆಪ್ಪತಾತ ಮೂರ್ತಿಯನ್ನು ತೆರವು ಮಾಡಬೇಕಾಗಿ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿತ್ತು. ಅದರಂತೆ ದೇವಾಲಯದ ಮೂರ್ತಿಯನ್ನು ತೆರವು ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ದೇವಾಲಯದಲ್ಲಿ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪಿಸಲೇ ಬೇಕು ಎಂದು ಮತ್ತೊಂದು ಸಮುದಾಯ ಪಟ್ಟು ಹಿಡಿದಿತ್ತು. ಈ ವಿಚಾರ ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗಿದೆ