ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮೇ 7ರಂದು ಧನುಂಜಯ ಹಾಗೂ ವಂಶಿಕೃಷ್ಣರ ನಡುವೆ ಜಗಳ ಸಂಭವಿಸಿದ್ದು, ವಂಶಿಕೃಷ್ಣ, ಉದಯ್ ಹಾಗೂ ರಂಗಸ್ವಾಮಿ ಅವರುಗಳು ಧನುಂಜಯನಿಗೆ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಗಾಯ ಪಡಿಸಿರುವ ಕುರಿತು ಪ್ರಕರಣ ದಾಖಲಾಗಿದೆ.
ಈ ಸಂಬಂಧ ಬಳ್ಳಾರಿ ಠಾಣೆಯಲ್ಲಿ ಪ್ರಕರಣ ಸಂಖ್ಯೆ 106/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ವಿವಿಧ ಕಲಂಗಳಡಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಳಗಲ್ಲು ಗ್ರಾಮದಲ್ಲಿ ದೌರ್ಜನ್ಯ ಪ್ರಕರಣ
ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ ಕರೆಮೋಲಿ ಗ್ರಾಮದಲ್ಲಿ ದುರ್ಗಣ್ಣ ಹಾಗೂ ಹುಲೆಪ್ಪ ಅವರ ಮೇಲೆ ಸಿಂಧವಾಳ್ ನರಸಿಂಹ ಸೇರಿದಂತೆ ಇತರೆ 36 ಜನರು ಹಲ್ಲೆ ಹಾಗೂ ದೌರ್ಜನ್ಯ ಎಸಗಿರುವ ಕುರಿತು ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
17 ವರ್ಷದ ಬಾಲಕ ಅಪಹರಣ
ಬಳ್ಳಾರಿ ನಗರದ ನಿವಾಸಿಯಾಗಿರುವ 17 ವರ್ಷದ ವಿನಯ್ ಎಂಬ ಬಾಲಕನನ್ನು ಅಪಹರಿಸಿಕೊಂಡು ಹೋಗಿರುವ ಕುರಿತು ಬಾಲಕನ ತಂದೆ ಎಸ್.ಆರ್. ರವಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಕಲಂ 137(2) ಅಡಿಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವಿರಾಪುರ ಗ್ರಾಮದಲ್ಲಿ ಮಹಿಳೆಯ ಮೇಲೆ ಹಲ್ಲೆ
ಬಳ್ಳಾರಿ ಜಿಲ್ಲೆಯ ವಿರಾಪುರ ಗ್ರಾಮದ ಶಮೀನಾ ಬಾನು ಅವರಿಗೆ ಅವರ ಪತಿ ದಾದವು ಹಾಗೂ ಸಂಬಂಧಿಕರು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ತಿಳಿಸಿದ್ದಾರೆ.





