ಬೆಳಗಾಯಿತು ವಾರ್ತೆ | Www.belagayithu.in
ಚಾಮರಾಜನಗರ: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಿರಂತರವಾಗಿ ದುಷ್ಕರ್ಮಿಗಳು ಕಳ್ಳತನ ಎಸಗುತ್ತಿದ್ದಾರೆ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನವಾಗಿತ್ತು ಆ ಘಟನೆ ಮಾಸುವ ಮುನ್ನವೇ ಇದೀಗ ಕಳ್ಳರು ಮತ್ತೆ ಕೈಚಳಕ ತೋರಿಸಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಹಬ್ಬ ಮುಗಿದ ಮೂರೇ ದಿನಕ್ಕೆ ದೇವಸ್ಥಾನದ ಬಾಗಿಲೂ ಮೀಟಿ 4 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ.
ನಡೆದಿದ್ದೇನು?
ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳರ ಕೈಚಳಕ ಮುಂದುವರೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಬಸವೇಶ್ವರ ಮತ್ತು ಮಾರಮ್ಮ ದೇವಸ್ಥಾನದ ಬಾಗಿಲುಗಳನ್ನು ಮೀಟಿ ಕಳ್ಳತನ ಮಾಡಲಾಗಿದೆ. ಹಬ್ಬ ಮುಗಿದು ಮೂರೇ ದಿನಕ್ಕೆ ದೇಗುಲದಲ್ಲಿದ್ದ 4 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ.





