ಬೆಳಗಾಯಿತು ವಾರ್ತೆ
ಹಡಗಲಿ: ಬಂಜಾರ ಸಮುದಾಯದ ಆರಾಧ್ಯದೈವ ಸಂತ ಶ್ರೀ ಸೇವಾಲಾಲ್ ರವರ 285ನೇ ಜಯಂತಿ ಪ್ರಯುಕ್ತ ಭಾನುವಾರ ಹೂವಿನ ಹಡಗಲಿ ತಾಲೂಕಿನ ಲಿಂಗನಾಯಕನ ಹಳ್ಳಿ ತಾಂಡದಲ್ಲಿ ಸುಮಾರು 80ಕ್ಕೂ ಹೆಚ್ಚು ಭಕ್ತರು ಮಾಲೆ ಧರಿಸಿದರು.
ನಂತರ ತಾಂಡದ ಶ್ರೀ ಸೇವಾಲಾಲ್ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ಪಾದಯಾತ್ರೆ ಮೂಲಕ ಸಂತ ಸೇವಾಲಾಲ್ ಅವರು ಜನಿಸಿದ ಸುರಗೊಂಡನಕೊಪ್ಪದ ಕಡೆ ಪಯಣ ಬೆಳೆಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮತ್ತು ಮಹಿಳೆಯರು ಸೇವಾಲಾಲ್ ರವರ ಹಾಡುಗಳನ್ನು ಹಾಡುತ್ತ ಅವರನ್ನು ಹರಸಿ ಕಳಿಸಲಾಯಿತು.
ಈ ನಮ್ಮ ದೇಶದ ನೆಲ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದು, ಈ ವೈವಿಧ್ಯತಾ ಸಂಸ್ಕೃತಿಗೆ ಹಲವಾರು ಸಾಂಸ್ಕೃತಿಕ ರಾಯಭಾರಿಗಳು ಕಾರಣೀಭೂತರು, ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ತಮಂಧತೆಯನ್ನು ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರುಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರು.
ಹಾಗಾಗಿ ಪ್ರತಿ ವರ್ಷ ಅವರ ಜಯಂತಿಯನ್ನು ಬಂಜಾರ ಸಮುದಾಯದವರು ಮತ್ತು ಮಾಲಾಧಾರಿಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ.