ಬಳ್ಳಾರಿ: ಸದಾಶಿವ ಆಯೋಗ ವರದಿ ಜಾರಿಗೆ ಕೇಲವರು ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದು, ಸರ್ಕಾರ ಇವರ ಒತ್ತಡಕ್ಕೆ ಮಣಿದು ಈ ಆಯೋಗವನ್ನು ಸರ್ಕಾರ ಜಾರಿ ಮಾಡಬಾರದು ಎಂದು ಗೋರ ಸೇನಾ ಜಿಲ್ಲಾಧ್ಯಕ್ಷ ಚಂದ್ರನಾಯ್ಕ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಆವರಣದಲ್ಲಿ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರ ಅವರಿಗೆ ಮನವಿ ಮಾಡಿ ಮಾತನಾಡಿದರು.
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಸ್ಥಿತಿಗತಿ, ಸರ್ಕಾರದ ಸೌಲಭ್ಯಗಳ ಹಂಚಿಕೆ ಮತ್ತು ವಿತರಣೆಯಲ್ಲಿ ಆಗಿರುವ ತಾರತಮ್ಯ ಕುರಿತು ಅಧ್ಯಯನ ಮಾಡಲು 2005 ರಲ್ಲಿ ರಾಜ್ಯ ಸರ್ಕಾರ ಏಕ ಸದಸ್ಯ ಆಯೋಗ ವನ್ನು ರಚನೆ ಮಾಡಿತ್ತು. ನ್ಯಾ ಎನ್ ವೈ ಹನುಮಂತಪ್ಪ, ನ್ಯಾ .ಬಾಲಕೃಷ್ಣ ಅವರ ನಂತರದಲ್ಲಿ ಆಯೋಗದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ನ್ಯಾ ಎ ಜೆ ಸದಾಶಿವ ಅವರು 2012 ರಲ್ಲಿ ತಮ್ಮ ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು.
ಸೋರಿಕೆಯಾಗಿರುವ ಈ ವರದಿಯ ಶಿಪಾರಸ್ಸುಗಳನ್ನು ಗಮನಿಸಿದಾಗ ಆಯೋಗದ ರಚನೆಯ ಉದ್ದೇಶಗಳಿಗೆ ವಿರುದ್ಧವಾಗಿರುವಂತೆ ಕಂಡು ಬಂದಿವೆ. ಪರಿಶಿಷ್ಟ ಪಟ್ಟಿಯ ಕೆಲ ಸಮುದಾಯಗಳನ್ನು ಒಲೈಸುವ, ಮತ್ತೆ ಕೆಲ ಸಮುದಾಯಗಳನ್ನು ಅಪಮಾನ ಮಾಡಿರುವ ಅಂಶಗಳು ಇದರಲ್ಲಿ ಕಂಡು ಬಂದಿವೆ. ಅಸ್ಪಷ್ಠ, ಅವಾಸ್ತವಿಕ ಮತ್ತು ಅಸಂವಿಧಾನಿಕ ಅಂಶಗಳು ಈ ವರದಿಯಲ್ಲಿ ಒಳಗೊಂಡಿವೆ. ನಾಡಿನ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳ ಸಾಂವಿಧಾನಿಕ ಮೀಸಲಾತಿ ಹಕ್ಕನ್ನು ಅಭದ್ರಗೊಳಿಸುವ ಇದರಲ್ಲಿ ಹುನ್ನಾರ ಅಡಗಿದೆ. ಹಾಗಾಗಿ ಈ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬಾರದು ಎಂದು ಬಂಜಾರ, ಭೋವಿ, ಕೊರಮ, ಕೊರಚ, ಚಲವಾದಿ, ಅಲೆಮಾರಿ ಸೇರಿದಂತೆ ಬಹುಸಂಖ್ಯಾತ ಪರಿಶಿಷ್ಟ ಜಾತಿಯ ಸಮುದಾಯಗಳು ಹೋರಾಟಗಳನ್ನು ಮಾಡುತ್ತಾ ಬಂದಿದೆ ಎಂದರು.
ಒಂದು ವೇಳೆ ಈ ಆಯೋಗವನ್ನು ಜಾರಿ ಮಾಡಿದರೆ ಬಂಜಾರ ಸಮುದಾಯ ಸೇರಿದಂತೆ ೧೦೧ ಜಾತಿಯ ಸಮುದಾಯ ಬಿದಿದೆ ಬರುತ್ತದೆ. ಹಾಗಾಗಿ ಸದಾಶಿವ ಆಯೋಗವನ್ನು ಜಾರಿ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗೋರ ಸೇನಾ ಬಳ್ಳಾರಿ ಜಿಲ್ಲಾಧ್ಯಕ್ಷ ಚಂದ್ರು ನಾಯ್ಕ್ ,ಜಿಲ್ಲಾ ಗೌರವ ಅಧ್ಯಕ್ಷ ನಾಯ್ಕ್ ಸ್ವಾಮಿ ನಾಯ್ಕ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯ್ಕ್, ಸಂಘಟನಾ ಕಾರ್ಯದರ್ಶಿ ಕ್ರಿಷ್ಣ ನಾಯ್ಕ್ ಸಂತೋಷ್ ನಾಯ್ಕ್ , ಕನ್ಯಾ ನಾಯ್ಕ್ ಶೇಖರ್ ನಾಯ್ಕ್ ವೆಂಕಟೇಶ್ ನಾಯ್ಕ್, ಶಿವಾ ನಾಯ್ಕ್ ಸೇರಿದಂತೆ ಇತರರು ಹಾಜರಿದ್ದರು.





