ಬೆಳಗಾಯಿತು ವಾರ್ತೆ
ಬಳ್ಳಾರಿ: ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಪ್ರಥಮ ಶಿಕ್ಷಣ ಸಂಸ್ಥೆಯಾದ ಹೀರದ ಸೂಗಮ್ಮ ಶಾಲೆಯ ಶತಮಾನೋತ್ಸವದ ಅಂಗವಾಗಿ ಶುಕ್ರವಾರ ನಗರದಲ್ಲಿ ವೈಭವದ ಸ್ಥಬ್ದಚಿತ್ರ ಮೆರವಣಿಗೆ ನಡೆಯಿತು.
ನಗರದ ಮರಿಸ್ವಾಮಿ ಮಠದಿಂದ ಆರಂಭವಾದ ಮೆರವಣಿಗೆಗೆ ಕಲ್ಯಾಣ ಮಠದ ಶ್ರೀಗಳು ಚಾಲನೆ ನೀಡಿದರು. ಹೀರದ ಸೂಗಮ್ಮ ಶಾಲೆಯ ಇತಿಹಾಸ ಮತ್ತು ಶತಮಾನದ ಸಾಧನೆಯನ್ನು ಪ್ರತಿಬಿಂಬಿಸುವ ಸ್ಥಬ್ದಚಿತ್ರವು ಸಾರ್ವಜನಿಕರ ಗಮನ ಸೆಳೆಯಿತು.
ಡೊಳ್ಳು, ವೀರಗಾಸೆ, ತಮಟೆ, ಡೋಲು ಹಾಗೂ ಅಲಂಕಾರಿಕ ವಿದ್ಯುತ್ ದೀಪಗಳೊಂದಿಗೆ ಸಾಗಿದ ಮೆರವಣಿಗೆ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ಮೆರವಣಿಗೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಅಜೀವ ಸದಸ್ಯರು, ವೀರಶೈವ ಸಮಾಜದ ಮುಖಂಡರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಸಂಘದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು.
ಮೆರವಣಿಗೆಯು ದೊಡ್ಡ ಮಾರುಕಟ್ಟೆ, ಬ್ರೂಸ್ ಪೇಟೆ, ತೇರು ಬೀದಿ, ಜೈನ ಮಾರುಕಟ್ಟೆ ಹಾಗೂ ಗವಿಯಪ್ಪ ಸರ್ಕಲ್ ಮಾರ್ಗವಾಗಿ ಸಾಗುತ್ತಾ ಹೀರದ ಸೂಗಮ್ಮ ಶಾಲೆಯ ಆವರಣ ತಲುಪಿತು.
ಮಾರ್ಗದುದ್ದಕ್ಕೂ ಸಾರ್ವಜನಿಕರು ಮೆರವಣಿಗೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಿಗೆ ಈ ಮೆರವಣಿಗೆ ಅದ್ದೂರಿ ಚಾಲನೆ ನೀಡಿತು.





