ಬೆಳಗಾಯಿತು ವಾರ್ತೆ | www.belagayithu.in
ಕೊಪ್ಪಳ, ಮೇ 02: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ರಾಜಕೀಯ ನಾಯಕರಿಂದ ಆರೋಪ, ಪ್ರತ್ಯಾರೋಪ ಹೆಚ್ಚಾಗಿದೆ. ಈ ನಡುವೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನನ್ನ ಜೊತೆಗೆ ಸಂಧಾನ ಮಾಡಿಕೊಂಡಿದ್ರು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಬುಧವಾರ ಗಂಗಾವತಿಯಲ್ಲಿ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮನ್ ಫ್ರೆಂಡ್ ಮೂಲಕ ಸಂಧಾನ ಮಾಡಿಕೊಂಡರು. ನನ್ನ ಜೊತೆ ಬುಕ್ ಆಗಿದ್ದು ಸಿದ್ದರಾಮಯ್ಯ. ಕೆಆರ್ಪಿಪಿ ಹತ್ತು ಸೀಟ್ ಗೆದ್ರೆ ಸರ್ಕಾರ ರಚನೆಗೆ ಬೇಕಾಗತ್ತೆ ಅಂತ ನನ್ನ ಜೊತೆ ಬುಕ್ ಆಗಿದ್ರು ಎಂದು ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.
ಇಕ್ಬಾಲ್ ಅನ್ಸಾರಿ ತಲೆಯಲ್ಲಿ ಎಚ್.ಆರ್. ಶ್ರೀನಾಥ್ ಮತ್ತು ಮಲ್ಲಿಕಾರ್ಜುನ ನಾಗಪ್ಪ ನನಗೆ ಬುಕ್ ಆಗಿದ್ದಾರೆ ಅಂತ ತಲೆಯಲ್ಲಿ ಇದೆ. ಆದ್ರೆ ನಿಜಕ್ಕೂ ನನ್ನ ಜೊತೆ ಬುಕ್ ಆಗಿದ್ದು ಸಿದ್ದರಾಮಯ್ಯ. ನನ್ನ ಜೊತೆ ಬುಕ್ ಆಗಿರೋದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಮತ್ತು ಬಳ್ಳಾರಿಗೆ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬಂದಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಮನ್ ಫ್ರೆಂಡ್ ಮೂಲಕ ಹಿಂದೆ ಆಗಿರೋದನ್ನ ಮರೆತು ಒಂದಾಗೋಣ ಅಂತ ಡೀಲ್ ಮಾಡಿಕೊಂಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.





