ಬೆಳಗಾಯಿತು ವಾರ್ತೆ | Www.belagayithu.in
ಬೆಂಗಳೂರು: ಶಾಸಕರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು, ಕಾರ್ಯದರ್ಶಿಗಳು ವಿಫಲವಾಗಿದ್ದಾರೆಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಲಾಪ ನಡೆಸದೆ ಪೀಠದಿಂದ ಎದ್ದು ಹೋದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
ಸಚಿವರ ಕಾರ್ಯವೈಖರಿಗೆ ಸದನದಲ್ಲೇ ಖಾದರ್ ಗರಂ ಆದರು.
230 ಲಿಖಿತ ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಮಾತ್ರ ಸಚಿವರಿಂದ ಉತ್ತರ ಬಂದಿದೆ. ಉತ್ತರಗಳನ್ನು ನೀಡುವಂತೆ ಮೊನ್ನೆಯೇ ಮಂತ್ರಿಗಳು, ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದೇವೆ. ಸದನ ನಡೆಸುವುದು ಮಂತ್ರಿಗಳಿಗಾಗಿ ಅಲ್ಲ, ಶಾಸಕರ ಸಮಸ್ಯೆಗಳಿಗಾಗಿ. ಎಲ್ಲ ಪಕ್ಷಗಳ ಶಾಸಕರೂ ಪ್ರಶ್ನೆಗಳನ್ನು ಕೇಳುತ್ತಾರೆ. ನಿಯಮಾವಳಿ ಪ್ರಕಾರ ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲಿಲ್ಲ ಅಂದ್ರೆ ಹೇಗೆ ? ಹೀಗಾದರೆ ಶಾಸಕರು ಸದನಕ್ಕೆ ಯಾಕೆ ಬರಬೇಕು ಹೇಳಿ’ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
‘ಸರಿಯಾದ ಸಮಯಕ್ಕೆ ಮಂತ್ರಿಗಳು ಸದನಕ್ಕೆ ಬರೋದಿಲ್ಲ. ಹಿಂದೆಯೂ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈಗಾಗಲೇ ನಾಲ್ಕು ಭಾರಿ ಸೂಚನೆ ನೀಡಿದ್ದೇನೆ. ಇಂದೂ ಸೇರಿ ಐದನೇ ಬಾರಿಯೂ ಸುಧಾರಿಸದಿದ್ದರೆ ಏನು ಮಾಡೋದು. ಸುಧಾರಣೆ ಕಾಣಲೇ ಇಲ್ಲ, ಸದನ ನಡೆಸೋದು ಹೇಗೆ ? ಹೀಗಾಗಿ, ಸಚಿವರು ಬಂದು ಸ್ಪಷ್ಟನೆ ನೀಡುವವರೆಗೂ ಸದನ ನಡೆಸೋದಿಲ್ಲ’ ಎಂದು ಹೇಳಿ ಸದನದಿಂದ ಖಾದರ್ ಹೊರಹೋದರು.





