ಅನಾರೋಗ್ಯದಿಂದ ನರಳುತ್ತಿದ್ದ ಅನಾಥ ವೃದ್ಧೆಗೆ ನೆರವಾದ ಮಾಜಿ ಮೇಯರ್ ರಾಜೇಶ್ವರಿ



ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ನಗರದ ಬಿಮ್ಸ್ ಆಸ್ಪತ್ರೆ ಮುಂಭಾಗದ ಬಸ್ ನಿಲ್ದಾಣದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಅನಾಥ ವೃದ್ಧೆ ಮಹಿಳೆಗೆ ಚಿಕಿತ್ಸೆ ಒದಗಿಸುವ ಮೂಲಕ ಮಾಜಿ ಮೇಯರ್ ಎಂ. ರಾಜೇಶ್ವರಿ ಸುಬ್ಬರಾಯುಡು ಅವರು ಮಾನವೀಯತೆ ಮೆರೆದಿದ್ದಾರೆ.

ಸ್ಥಳೀಯ ಪತ್ರಕರ್ತರೊಬ್ಬರು ಘಟನೆ ಗಮನಿಸಿ ತಕ್ಷಣ 112 ಪೊಲೀಸ್ ವಾಹನಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸರ್ಕಾರಿ 108 ಆಂಬುಲೆನ್ಸ್ ಸೇವೆಗೂ ಕರೆ ಮಾಡಿ ಸ್ಥಳಕ್ಕೆ ಕರೆಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಮಹಾನಗರ ಪಾಲಿಕೆ ಸದಸ್ಯೆಯೂ ಆಗಿರುವ ಮಾಜಿ ಮೇಯರ್ ರಾಜೇಶ್ವರಿ ಅವರು ಸ್ಥಳಕ್ಕೆ ಧಾವಿಸಿ ವೃದ್ಧೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ತುರ್ತು ಚಿಕಿತ್ಸೆಗೆ ಬಿಮ್ಸ್ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿಗೆ ದಾಖಲಿಸಿ, ಸಂಬಂಧಪಟ್ಟ ವೈದ್ಯರಿಗೆ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿದರು.

ಕಳೆದ ಒಂದು ವಾರದಿಂದ ಬಿಮ್ಸ್ ಆಸ್ಪತ್ರೆ ಎದುರಿನ ಬಸ್ ನಿಲ್ದಾಣದಲ್ಲೇ ಈ ವೃದ್ಧೆ ಅನಾರೋಗ್ಯದಿಂದ ನರಳುತ್ತಿದ್ದು, ಯಾವುದೋ ಗುರುತು ಇಲ್ಲದ ವಾಹನ ಡಿಕ್ಕಿ ಹೊಡೆದು ಎರಡು ಕಾಲು ಹಾಗೂ ಸೊಂಟಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ವಿಚಾರಿಸಿದ ಪೊಲೀಸ್ ಸಿಬ್ಬಂದಿಗೆ, ತಾನು ಕೊಳಗಲ್ಲು ಗ್ರಾಮದವಳು, ಉಪ್ಪಾರ ಸಮುದಾಯಕ್ಕೆ ಸೇರಿದವಳು ಹಾಗೂ ತನ್ನ ಹೆಸರು ಲಕ್ಷ್ಮೀದೇವಿ ಎಂದು ತಿಳಿಸಿದ್ದಾಳೆ.

ಬಟ್ಟೆಯಿಲ್ಲದೆ ಬಿಸಿಲಿನಲ್ಲಿ ನರಳುತ್ತಿದ್ದ ಈ ವೃದ್ಧೆಯನ್ನು ಪ್ರತಿದಿನ ಸಾವಿರಾರು ಜನರು ನೋಡುತ್ತಿದ್ದರೂ, ಯಾರೂ ಸಹಾಯಕ್ಕೆ ಮುಂದಾಗಿರಲಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ನಿಲ್ದಾಣದ ಸುತ್ತಮುತ್ತ ವ್ಯಾಪಾರ ನಡೆಸುವ ಅಂಗಡಿ ಮಾಲೀಕರು, ಸಿಬ್ಬಂದಿ, ಬಸ್ ಚಾಲಕರು ಹಾಗೂ ನಿರ್ವಾಹಕರು ಸಹ ಮಹಿಳೆಯ ದುಸ್ಥಿತಿಯನ್ನು ಗಮನಿಸಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ನಡುವೆಯೇ ಸ್ಥಳೀಯ ಪತ್ರಕರ್ತ ಜಂಬುನಾಥ್ ಹಾಗೂ ಮಾಜಿ ಮೇಯರ್ ರಾಜೇಶ್ವರಿ ಅವರು ಮಾನವೀಯತೆ ತೋರಿಸಿ ವೃದ್ಧೆಗೆ ಚಿಕಿತ್ಸೆ ದೊರಕುವಂತೆ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles