ಜೀನ್ಸ್ ರಫ್ತುದಾರರಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ನೆರವು

ಬೆಳಗಾಯಿತು ವಾರ್ತೆ Www.belagayithu.in
ಬಳ್ಳಾರಿ: ಜೀನ್ಸ್ ಉದ್ಯಮಿದಾರರು ರಫ್ತು ವಲಯಕ್ಕೆ ಪ್ರವೇಶಿಸಲು ಮುಂದಾದರೆ, ಅವರನ್ನು ಪೂರ್ಣ ಪ್ರಮಾಣದ ರಫ್ತುದಾರರನ್ನಾಗಿ ರೂಪಿಸಲು ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳು ಎಲ್ಲ ರೀತಿಯ ನೆರವು ಹಾಗೂ ಬೆಂಬಲ ನೀಡಲು ಸಿದ್ಧವಾಗಿವೆ ಎಂದು ಕಲಬುರಗಿ ಉತ್ತರ ವಲಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ.ವಿಠಲರಾಜು ಅವರು ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಾಣ್ಯಿಜ್ಯೋದ್ಯಮ ಸಂಸ್ಥೆ ಇವರ ಸಹಯೋಗದೊಂದಿಗೆ ಜಿಲ್ಲೆಯ ಜವಳಿ/ಜೀನ್ಸ್ ವಲಯದ ಉದ್ದಿಮೆದಾರರಿಗೆ ನಗರದ ಮೀನಾಕ್ಷಿ ಸರ್ಕಲ್ ಹತ್ತಿರದ ಡಿಸ್ಟ್ರಿಕ್ಟ್ ಚೇಂಬರ್ ಆಫ್ ಕಾಮರ್ಸ್ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಒಂದು ದಿನದ ‘ರಪ್ತು ಪ್ರೋತ್ಸಾಹನ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಉತ್ಪಾದನೆಗೆ ಸೀಮಿತವಾಗದೆ ರಫ್ತು ಮಾಡುವ ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕ ಪ್ರಯತ್ನವನ್ನು ಉದ್ಯಮಿದಾರರು ಬೆಳೆಸಿಕೊಳ್ಳಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಉತ್ಪನ್ನಗಳನ್ನು ಕಳುಹಿಸಲು ನಿರ್ದಿಷ್ಟ ಕಾರ್ಯವಿಧಾನ ಮತ್ತು ಗುಣಮಟ್ಟ ಅತ್ಯಂತ ಪ್ರಮುಖವಾಗಿದೆ ಎಂದು ಒತ್ತಿ ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಮಹಂತೇಶ ಕೆ.ಜಿ.ಕಂಚಿಮಠ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯ ಜೀನ್ಸ್ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ರಫ್ತು ವಿಭಾಗದಿಂದ ಬಳ್ಳಾರಿಯನ್ನು ‘ಆಸ್ಪಿರೇಷನ್ ಡಿಸ್ಟ್ರಿಕ್ಟ್’ (ಮಹತ್ವಾಕಾಂಕ್ಷಿ ಜಿಲ್ಲೆ) ಎಂದು ಆಯ್ಕೆ ಮಾಡಲಾಗಿದ್ದು, ರಾಜ್ಯದಲ್ಲಿ ಒಟ್ಟು ನಾಲ್ಕು ಜಿಲ್ಲೆಗಳನ್ನು ಈ ಯೋಜನೆಗೆ ಗುರುತಿಸಲಾಗಿದ್ದು, ಅವುಗಳಲ್ಲಿ ಬಳ್ಳಾರಿಯೂ ಒಂದಾಗಿದೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ಎಂಎಸ್‌ಎಂಇ ವಲಯದಡಿ ಜೀನ್ಸ್ ಉದ್ಯಮಕ್ಕೆ ಅಪಾರ ಅವಕಾಶಗಳಿವೆ. ಪ್ರಸ್ತುತ ಇಲ್ಲಿನ ಸ್ಥಳೀಯ ಉದ್ಯಮಿಗಳು ತಮ್ಮ ವ್ಯವಹಾರವನ್ನು ದೇಶೀಯ ಹಾಗೂ ಪ್ರಾದೇಶಿಕ ಮಾರುಕಟ್ಟೆಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಇವರಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಮಾಡುವ ಸಾಮರ್ಥ್ಯವಿದ್ದರೂ, ರಫ್ತು ಪ್ರಕ್ರಿಯೆಯ ಬಗ್ಗೆ ಸೂಕ್ತ ಮಾಹಿತಿಯ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಹಾಗೂ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ತಜ್ಞರಿಂದ ರಫ್ತು ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಸಂಜೀವರಾಯನಕೋಟೆ ಕೈಗಾರಿಕಾ ಪಾರ್ಕ್‌ನಲ್ಲಿ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ತಲೆಎತ್ತಲಿರುವ ಕೈಗಾರಿಕೆಗಳು ನೇರವಾಗಿ ವಿದೇಶಗಳಿಗೆ ರಫ್ತು ಮಾಡಲು ಸಜ್ಜಾಗಬೇಕಿದೆ. ಬಳ್ಳಾರಿಯ ಜೀನ್ಸ್ ಉತ್ಪನ್ನಗಳು ಬೇರೆ ನಗರಗಳ ಮೂಲಕ ರವಾನೆಯಾಗುವ ಬದಲು, ಬಳ್ಳಾರಿಯಿಂದಲೇ ನೇರವಾಗಿ ಜಾಗತಿಕ ಮಟ್ಟಕ್ಕೆ ರಫ್ತಾಗಬೇಕು ಎಂಬುದು ಈ ಯೋಜನೆಯ ಮುಖ್ಯ ಆಶಯವಾಗಿದೆ. ಸ್ಥಳೀಯ ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳ್ಳಾರಿಯ ಛಾಪು ಮೂಡಿಸಬೇಕು ಎಂದು ಕರೆ ನೀಡಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವುದಷ್ಟೇ ಅಲ್ಲದೆ, ಜಾಗತಿಕ ಮಾರುಕಟ್ಟೆಗೆ ತಲುಪಲು ಅಗತ್ಯವಿರುವ ಅಂಶಗಳಾದ ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಮಾಣೀಕರಣ, ಸುಧಾರಿತ ಪ್ಯಾಕೇಜಿಂಗ್ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆ, ವಿದೇಶಿ ವ್ಯಾಪಾರ ನಿಯಮಗಳು ಹಾಗೂ ರಫ್ತು ದಾಖಲಾತಿ ಪ್ರಕ್ರಿಯೆಗಳು, ವಿದೇಶಿ ಖರೀದಿದಾರರನ್ನು ಸಂಪರ್ಕಿಸುವ ವಿಧಾನಗಳು, ಸರ್ಕಾರದಿಂದ ಸಿಗುವ ರಫ್ತು ಸವಲತ್ತುಗಳು ಮತ್ತು ಪ್ರೋತ್ಸಾಹಕಗಳ ಕುರಿತು ಅರಿವು ಹೊಂದಬೇಕಿದೆ ಎಂದು ಹೇಳಿದರು.
ಉದ್ಯಮಿಗಳು ಕೇವಲ ಸ್ಥಳೀಯ ಅಥವಾ ದೇಶೀಯ ಮಾರುಕಟ್ಟೆಗೆ ಸೀಮಿತವಾಗದೆ ಜಾಗತಿಕ ಮಟ್ಟಕ್ಕೆ ಬೆಳೆಯಬೇಕು. ರಫ್ತು ವಹಿವಾಟು ವಿಸ್ತರಣೆಯಿಂದ ಜಿಲ್ಲೆಯ ಆರ್ಥಿಕ ಪ್ರಗತಿ ವೇಗ ಪಡೆಯಲಿದ್ದು, ಸ್ಥಳೀಯ ಯುವಜನತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಕೆ.ಸಿ.ಸುರೇಶಬಾಬು, ಬಳ್ಳಾರಿ ಜಿಲ್ಲಾ ಕೈಗಾರಿಕೆಗಳ ಅಸೋಷಿಯೇಷನ್ ಅಧ್ಯಕ್ಷ ವಿ.ರಾಮಚಂದ್ರ, ಚೆನೈನ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತಿಯ ಪರಿಷತ್ತು ಮಾಜಿ ಅಧ್ಯಕ್ಷ ಸಿ.ಎ.ಪನ್ನರಾಜ್ ಸಿರಿಗೇರಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗೀರಿಶ್ ವಿ.ಕುಲಕರ್ಣಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಎನ್.ಲಮಾಣಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಗಾರ್ಮೆಂಟ್ಸ್, ಕೈಮಗ್ಗ ನೇಕಾರರ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles