ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KALSA) ನಿರ್ದೇಶನದಂತೆ ಬಳ್ಳಾರಿ ಜಿಲ್ಲೆಯಲ್ಲಿ ಈ ವರ್ಷದ ಮೂರನೇ ಮೆಗಾ ಲೋಕ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಅವರು ಹೇಳಿದರು.
ನಗರದ ನೂತನ ಜಿಲ್ಲಾ ನ್ಯಾಯಾಲಯದ ಮೊದಲ ಮಹಡಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು,
ತಿಂಗಳ ಎರಡನೇ ಶನಿವಾರ ನಡೆಯಬೇಕಿದ್ದ ಲೋಕ ಅದಾಲತ್ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಬದಲಾದ ದಿನಾಂಕದಲ್ಲಿ ನಡೆಸಲಾಯಿತು.
ಲೋಕ ಅದಾಲತ್ ಮೂಲಕ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿದೆ. ಸಿವಿಲ್ ದಾವೆಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಕೌಟುಂಬಿಕ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ವಿವಿಧ ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಪರಿಗಣಿಸಲಾಯಿತು.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 35,679 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ಈ ಪೈಕಿ ಮೂರನೇ ಮೆಗಾ ಲೋಕ ಅದಾಲತ್ಗಾಗಿ 6,199 ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಸುಮಾರು 3,413 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಸಾಧ್ಯತೆ ಇರುವ ಹಂತದಲ್ಲಿವೆ. ಈ ಪೈಕಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಒಂದೇ ದಿನದಲ್ಲಿ ರಾಜಿ ಮೂಲಕ ಇತ್ಯರ್ಥಪಡಿಸುವ ವಿಶ್ವಾಸವನ್ನು ನ್ಯಾಯಾಂಗ ಇಲಾಖೆ ವ್ಯಕ್ತಪಡಿಸಿದೆ.
ಸಮಯ, ಹಣ ಉಳಿಸುವ ಅವಕಾಶ
ಲೋಕ ಅದಾಲತ್ನ ಪ್ರಮುಖ ಉದ್ದೇಶ ಕಕ್ಷಿದಾರರಿಗೆ ಸರಳ, ತ್ವರಿತ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ಒದಗಿಸುವುದಾಗಿದೆ. ಲೋಕ ಅದಾಲತ್ನಲ್ಲಿ ಪ್ರಕರಣ ರಾಜಿಯಾದಲ್ಲಿ ಸಾಮಾನ್ಯವಾಗಿ ದೀರ್ಘಕಾಲ ನಡೆಯುವ ವಿಚಾರಣೆ ತಪ್ಪಿ, ಅದೇ ದಿನದಲ್ಲಿ ಪ್ರಕರಣ ಇತ್ಯರ್ಥವಾಗುವ ಅವಕಾಶವಿದೆ. ಅಲ್ಲದೆ, ರಾಜಿ ಮೂಲಕ ಪ್ರಕರಣ ಇತ್ಯರ್ಥವಾದಾಗ ಪಾವತಿಸಿದ ಕೋರ್ಟ್ ಶುಲ್ಕವನ್ನು ನಿಯಮಾನುಸಾರ ಮರುಪಾವತಿಸುವ ವ್ಯವಸ್ಥೆಯೂ ಇದೆ.
ಸಾಮಾನ್ಯ ನ್ಯಾಯಾಲಯದ ಪ್ರಕ್ರಿಯೆಗೆ ಹೋಲಿಸಿದರೆ ಲೋಕ ಅದಾಲತ್ನಲ್ಲಿ ರಾಜಿ ಸಂಧಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಕ್ಷಿದಾರರು ಹಾಗೂ ಸಂಧಾನಕಾರರ ನಡುವೆ ಸೌಹಾರ್ದಯುತ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತದೆ.
ಅವಾರ್ಡ್ ಅಂತಿಮ; ಮೇಲ್ಮನವಿಗೆ ಅವಕಾಶವಿಲ್ಲ
ಲೋಕ ಅದಾಲತ್ನಲ್ಲಿ ಎರಡೂ ಪಕ್ಷಗಳ ಸಮ್ಮತಿಯೊಂದಿಗೆ ಪ್ರಕರಣ ಇತ್ಯರ್ಥವಾದ ಬಳಿಕ ನೀಡುವ ಅವಾರ್ಡ್ ಅಂತಿಮವಾಗಿರುತ್ತದೆ. ಸಾಮಾನ್ಯ ನ್ಯಾಯಾಲಯದ ತೀರ್ಪಿನಂತೆ ಮೇಲ್ಮನವಿ ಸಲ್ಲಿಸಿ ಪ್ರಕರಣವನ್ನು ಮುಂದುವರಿಸುವ ಅವಕಾಶ ಇರುವುದಿಲ್ಲ. ಇದರಿಂದ ಕಕ್ಷಿದಾರರ ಸಮಯ ಮತ್ತು ಹಣ ಎರಡೂ ಉಳಿತಾಯವಾಗುವುದರ ಜೊತೆಗೆ, ವಿವಾದಕ್ಕೆ ಶಾಶ್ವತ ಪರಿಹಾರ ದೊರೆಯುತ್ತದೆ.
ಲೋಕ ಅದಾಲತ್ನಲ್ಲಿ ಯಾರೊಬ್ಬರು ಗೆದ್ದರು, ಮತ್ತೊಬ್ಬರು ಸೋತರು ಎಂಬ ಭಾವನೆಗಿಂತ ಪರಸ್ಪರ ಒಪ್ಪಿಗೆಯ ಮೂಲಕ ವಿವಾದ ಬಗೆಹರಿಯುವುದರಿಂದ ಕುಟುಂಬ ಹಾಗೂ ಸಮಾಜದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಆದ್ದರಿಂದ ಬಳ್ಳಾರಿ ಜಿಲ್ಲೆ ಹಾಗೂ ಬಳ್ಳಾರಿ ತಾಲೂಕಿನ ಸಾರ್ವಜನಿಕರು, ಕಕ್ಷಿದಾರರು ಮತ್ತು ವಕೀಲರು ಲೋಕ ಅದಾಲತ್ನ ಸದುಪಯೋಗ ಪಡೆದುಕೊಂಡು ರಾಜಿಯಾಗಬಹುದಾದ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ನ್ಯಾಯಾಂಗ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮುಂದಿನ ಲೋಕ ಅದಾಲತ್ ಡಿಸೆಂಬರ್ 12ರಂದು ನಡೆಯಲಿದ್ದು, ಪ್ರಸ್ತುತ ಲೋಕ ಅದಾಲತ್ನಲ್ಲಿ ಇತ್ಯರ್ಥವಾಗದೆ ಉಳಿಯುವ ಅರ್ಹ ಪ್ರಕರಣಗಳನ್ನು ಮುಂದಿನ ಲೋಕ ಅದಾಲತ್ನಲ್ಲಿಯೂ ಪರಿಹರಿಸಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ರಾಜೇಶ್ ಎನ್ ಹೊಸಮನಿ ಅವರು ಹಾಜರಿದ್ದರು.





