ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಜ್ಯದ ಎಲ್ಲಾ ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ ಲೋಡರ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಒಂದೇ ಬಾರಿಗೆ ಖಾಯಂಗೊಳಿಸಲು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಾರ್ಮಿಕರು ಶುಕ್ರವಾರ ಪ್ರತಿಭಟಿಸಿದರು.
ಸಮಾನತೆ ಯೂನಿಯನ್ ಕರ್ನಾಟಕದ ರಾಜ್ಯ ಸಂಚಾಲಕ ರಾಮಚಂದ್ರ ಮಾತನಾಡಿ, ರಾಜ್ಯದಲ್ಲಿ ನಗರಸ್ಥಳೀಯ ಸಂಸ್ಥೆಗಳಾದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಸ್ವಚ್ಛತಾ ಕೆಲಸವನ್ನು ಹೊರ ಗುತ್ತಿಗೆಗೆ ನೀಡಲಾಗಿದೆ.
ಆದರೆ ಕಾರ್ಮಿಕರನ್ನು ಅಪಾರವಾಗಿ ಶೋಷಿಸುವ ಗುತ್ತಿಗೆ ಪದ್ಧತಿಯು ಸರ್ಕಾರವೇ ನಡೆಸುತ್ತಿರುವ ಗುಲಾಮಿ ಪದ್ಧತಿಯಾಗಿದೆ.
ಈ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಎಲ್ಲಾ ಕಾರ್ಮಿಕರನ್ನು ಖಾಯಂ ಯೂನಿಯನ್ ಕರ್ನಾಟಕ ಹಾಗೂ ರಾಜ್ಯ ಪೌರ ಕಾರ್ಮಿಕರ ಸಂಘ ಸಫಾಯಿ ಕರ್ಮಚಾರಿ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ ಫಲವಾಗಿ 2016-17ರಲ್ಲಿ ಅಂದಿನ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ಪದ್ಧತಿ ರದ್ದುಪಡಿಸಿ ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡುವ ನಿರ್ಣಯ ತೆಗೆದುಕೊಂಡಿತು. 2016-17 ರಾಜ್ಯ ಸಚಿವ ಸಂಪುಟ ಸಭೆ ಸಂ: 07, ಪ್ರಕರಣ ಸಂ 2:215/2014, ಇಲಾಖೆಯ ಕಡತ ಸಂ: ನಅಇ 124 ಟಿ ಎಂ ಎಸ್ 2012 ದಿನಾಂಕ: 03.05.2016) .ಈ ನಿಯಮಾನುಸಾರ ಗುತ್ತಿಗೆ ಪದ್ಧತಿ ರದ್ದಾರ ಕೂಡಲೇ ಎಲ್ಲ ಕಾರ್ಮಿಕರನ್ನು ವಿಲೀನಗೊಳಿಸಿ ಖಾಯಂಗೊಳಿಸಬೇಕು. ಆದರೆ ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯದ ದಲಿತ ಪೌರಕಾರ್ಮಿಕರ ವಿರೋಧಿ ಅಧಿಕಾರಿಗಳು, ಸಚಿವ ಸಂಪುಟದ ನಿರ್ಣಯವನ್ನು ಯಥಾವತ್ತಾಗಿ ಅನುಷ್ಠಾನ ಮಾಡದೆ, ಪೌರಕಾರ್ಮಿಕರ ವಿಶೇಷ ನೇಮಕಾತಿ ನಿಯಮಗಳು -2017 ಎಂಬ ಪೌರಕಾರ್ಮಿಕರ ಬದುಕುಗಳನ್ನು ನಾಶ ಮಾಡುವಂತಹ ನಿಯಮಗಳನ್ನು ಜಾರಿ ಮಾಡಿದ್ದಾರೆ ಎಂದರು.
ಕಸ ಗುಡಿಸುವವರು, ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರಾಕ್ಟರ್-ಲಾರಿ ಅಥವಾ ಆಟೋಗಳಿಗೆ ತುಂಬುವವರನ್ನು ಲೋಡ, ಕಸ ಸಾಗಿಸುವವರನ್ನು ಚಾಲಕರು ಮತ್ತು ಒಳಚರಂಡಿಗಳಲ್ಲಿ ಕಟ್ಟಿಕೊಂಡ ಮಲ-ಮೂತ್ರಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುವವರು (ಯು.ಜಿ.ಡಿ ವರ್ಕರ್) ಎಂದು ಕಾರ್ಮಿಕರನ್ನು ವಿಂಗಡಿಸಲಾಗಿದೆ. ಈ ವಿಂಗಡಣೆಯ ಅನುಸಾರ ಅಧಿಕಾರಿಗಳು ಪೊರಕೆ ಹಿಡಿದು ಕಸ ಗುಡಿಸುವವರನ್ನು ಮಾತ್ರ ಪೌರಕಾರ್ಮಿಕರೆಂದು ಪರಿಗಣಿಸಿ ಬೇರೆ ಕಾರ್ಮಿಕರನ್ನು ಪ್ರತ್ಯೇಕಗೊಳಿಸಿದ್ದಾರೆ ಎಂದರು.
ಗುತ್ತಿಗೆ ಪದ್ಧತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬುದು ಈ ವಿಂಗಡಣೆಯ ಹಿಂದಿನ ದುರುದ್ದೇಶವಾಗಿದೆ. ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಇಷ್ಟವಿಲ್ಲದ ಅಧಿಕಾರಿಗಳು ಗುತ್ತಿಗೆದಾರರು ನೀಡುವ ಕಮಿಷನ್ಗೆ ಆಸೆಯಿಂದ ಅವರೊಂದಿಗೆ ಶಾಮೀಲಾಗಿ ಸ್ವಚ್ಛತೆಯ ಕೆಲಸದಲ್ಲಿ ತೊಡಗಿರುವ ಪೌರಕಾರ್ಮಿಕರೆಲ್ಲರನ್ನೂ ನೇರಪಾವತಿ, ನೇರನೇಮಕಾತಿ, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಟೈಮ್ಸ್ಟೇಲ್ ಎಂಬಂತಹ ಅಸಂಬದ್ಧ ಗುಂಪುಗಳಾಗಿ ವಿಂಗಡಿಸಿದ್ದಾರೆ. ಅವರ ಕಪಿಮುಷ್ಟಿಯಲ್ಲಿರುವ, ಅಧಿಕಾರಿಗಳಿಗೆ ಹತ್ತಿರವಾಗಿರುವ, ಲಂಚ ನೀಡಿದ ಬೆರಳೆಣಿಕೆಯಷ್ಟು ನೌಕರರನ್ನು ನೆಪ ಮಾತ್ರಕ್ಕೆ ಖಾಯಂ ಮಾಡಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಎಲ್ಲಾ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಹಾಜರಿದ್ದರು.