ಮರಿಯಮ್ಮನಹಳ್ಳಿ: ಕೊವೀಡ್19ರ ಮಾರ್ಗಸೂಚಿಗಳನ್ನು ಪಾಲಿಸಿ, ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬವನ್ನು,ಶಾಂತಿಯುತವಾಗಿ ಆಚರಿಸ ಬೇಕೆಂದು ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ ಕರೆನೀಡಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಪಟ್ಟಣ ಮತ್ತು ಠಾಣಾ ಸರಹದ್ದಿನ ಮುಸ್ಲಿಂ ಮುಖಂಡರ ಜೊತೆ ನಡೆಸಿದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬ, ಉತ್ಸವ, ಜಾತ್ರೆಗಳ ಆಚರಣೆಗೆ ಸರ್ಕಾರ ಕೆಲ ನಿಯಮಗಳನ್ನು ವಿಧಿಸಿದ್ದೂ, ಅದೇ ರೀತಿ ಬಕ್ರೀದ್ ಹಬ್ಬಕ್ಕೂ ಸಹ ಸರ್ಕಾರದ ಮಾರ್ಗಸೂಚಿ ಇದ್ದು ಎಲ್ಲಾ ಮುಸ್ಲಿಂ ಬಾಂಧವರು ಪಾಲನೆ ಮಾಡಿ ಹಬ್ಬ ಆಚರಣೆ ಮಾಡಬೇಕು. ಬಕ್ರೀದ್ ಆಚರಣೆಗೆ ಕೆಲ ನಿಯಮಗಳನ್ನು ವಿಧಿಸಿದೆ, ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಗರಿಷ್ಠ 50 ಜನಕ್ಕೆ ಅವಕಾಶ ಕಲ್ಪಿಸಲಾಗಿದ್ದು ತಂಡಗಳನ್ನು ರಚಿಸಿಕೊಂಡು ಸರದಿಯಲ್ಲಿ ನಮಾಜ್ ಮಾಡಬಹುದು. 65 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯರು ಹಾಗೂ 10 ವರ್ಷದೊಳಗಿನ ಮಕ್ಕಳು ಪ್ರಾರ್ಥನಾ ಮಂದಿರಕ್ಕೆ ಬರುವಂತಿಲ್ಲ. ಅವರು ಮನೆಯಲ್ಲಿದ್ದುಕೊಂಡೇ ನಮಾಜ್ ಮಾಡಬೇಕು ಎಂದರು. ಕನಿಷ್ಠ 6 ಅಡಿ ಸಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ದೇಹದ ಉಷ್ಣತೆ ಪರೀಕ್ಷೆ ಮಾಡಿ ಮಸೀದಿ ಒಳಗಡೆ ಬಿಡಬೇಕು, ಕಡ್ಡಾಯವಾಗಿ ಮಾಸ್ಕ ಧರಿಸಿರಬೇಕು, ಪ್ರಾರ್ಥನಾ ಮಂದಿರದಲ್ಲಿ ಸ್ಯಾನಿಟೈಜರ ವ್ಯವಸ್ಥೆ ಮಾಡಿರಬೇಕು. ನಮಾಜ್ ನಂತರ ವ್ಯಕ್ತಿ ಗಳ ಮಧ್ಯೆ ಪರಸ್ಪರ ಆಲಿಂಗನ, ಹಸ್ತಲಾಘವ ಕ್ಕೆ ಅವಕಾಶ ವಿಲ್ಲ. ಮಾರ್ಗಸೂಚಿಗಳನ್ನು ಪಾಲಿಸಿ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ತಿಳಿಸಿದ ಅವರು ಈ ಎಲ್ಲ ವ್ಯವಸ್ಥೆಯನ್ನು ಸಂಬಂಧಿಸಿದ ಮಸೀದಿ ಉಸ್ತುವಾರಿಗಳು, ಧರ್ಮ ಗುರುಗಳು, ಮುಖಂಡರು ನಿರ್ವಹಿಸಲು ಸೂಚಿಸಿದರು.
ಈ ಸಂಧರ್ಭದಲ್ಲಿ ಜಾಮಿಯ ಮಸೀದಿಯ ಮುತ್ತಾವಲಿ ಎನ್.ಎಸ್.ಬುಡೇನಸಾಬ್ ಮಾತನಾಡಿದರು.ಮುಖಂಡರಾದ ರಾಜಭಕ್ಷಿ ಹೊಳಗುಂದಿ,ಫಕೃಸಾಬ್,ಹೆಚ್.ಬುಡೇನಸಾಬ್,ರೆಡ್ಡಿ ಮಾಬುಸಾಬ್,ಎಂ.ನಜೀರ ಅಹ್ಮದ್, ಎ.ರಹೀಮ್,ರಿಯಾಜ್,ಮನ್ಸೂರ್, ಅಲ್ಲಾಭಕ್ಷಿ,ಸಮಿರ್,ಕಲೀಲ್,ರಫಿ ಹಾಗು ಠಾಣಾ ವ್ಯಾಪ್ತಿಯಾ ವಿವಿಧ ಗ್ರಾಮಗಳ ಮಸೀದಿಗಳ ಮುಖಂಡರು ಪಾಲ್ಗೊಂಡಿದ್ದರು.