ಬಳ್ಳಾರಿ: ನಗರದ ಅಧಿ ದೇವತೆಯಾದ ಕನಕ ದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ಜೋಡೆತ್ತುಗಳಿಂದ ದೇವಸ್ಥಾನದ ಸುತ್ತ ಮೂರು ಸುತ್ತು ಹಾಕಿ ಗಾಣಿಗ ಸಮುದಾಯದ ಸಂಪ್ರದಾಯದAತೆ ಮಂಗಳವಾರ ಬೆಳಿಗ್ಗೆ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು, ಗಾಲಿ ಶ್ರವಣ್ ಕುಮಾರ್ ಇತರರು ಸಾಕ್ಷಿಯಾದರು.
ಪ್ರತಿವರ್ಷ ಅದ್ಧೂರಿಯಾಗಿ ಸಂಜೆ ನಡೆಯುತ್ತಿದ್ದ ಸಿಡಿ ಬಂಡಿ ರಥೋತ್ಸವ ಕೋವಿಡ್ ಎರಡನೇ ಅಲೆ ಹಿನ್ನೆಲೆ ಜಿಲ್ಲಾಡಳಿತ ಆದೇಶದಂತೆ ಈ ಬಾರಿ ಬೆಳಿಗ್ಗೆ ೮:೪೫ಕ್ಕೆ ನಡೆಯಿತು ಇದರಿಂದಾಗಿ ಹೊರ ರಾಜ್ಯ, ಜಿಲ್ಲೆ, ಹಳ್ಳಿಗಳಿಂದ ಬರಬೇಕಾದ ಭಕ್ತಾಧಿಗಳಿಗೆ ಸಿಡಿ ಬಂಡಿ ರಥೋತ್ಸವ ನೋಡುವ ಭಾಗ್ಯ ಸಿಗದೆ ತುಸು ನಿರಾಸೆ ಆಯಿತು.
ರಥೋತ್ಸವ ಎಳೆಯುವ ಸಂದರ್ಭದಲ್ಲಿ ದೇವಸ್ಥಾನದ ಸುತ್ತ ಇರುವ ಕಟ್ಟಡ ಹತ್ತಿದ ಯುವಕರು ಯುವತಿಯರು ಸಿಡಿ ಬಂಡಿ ರಥೋತ್ಸವದ ಚಿತ್ರಗಳನ್ನು ಕ್ಯಾಮರ, ಮೊಬೈಲ್ ಗಳ ಮೂಲಕ ಸೆರೆ ಹಿಡಿದರು. ಕೆಲ ಯುವಕರು ಸೆಲ್ಫಿ ತೆಗೆದು ಕೊಂಡರೆ ಇನ್ನೂ ಕೆಲವರು ವಿಡಿಯೋ ತೆಗೆದು ಖುಷಿ ಪಟ್ಟರು.
ಬೆಳ್ಳಂ ಬೆಳಿಗ್ಗೆ ರಥೋತ್ಸವ ನಡೆದಿದ್ದರಿಂದ ರಥೋತ್ಸವ ನೋಡುವ ಭಾಗ್ಯ ಸಿಗದವರಿಗಾಗಿ ವಾಟ್ಸಪ್ ವಿಡಿಯೋ ಕಾಲ್, ಫೇಸ್ ಬುಕ್ ಲೈವ್, ರಥೋತ್ಸವದ ಸಂಪೂರ್ಣ ಚಿತ್ರವನ್ನೂ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.
ದೇವಸ್ಥಾನದ ಆವರಣದಲ್ಲಿ ಮತ್ತು ಒಳಗಡೆ ಮಾಸ್ಕ್ ಕಡ್ಡಾಯವಾಗಿ ಧರಿಸಿದ ಭಕ್ತಾಧಿಗಳಿಗೆ ಮಾತ್ರ ಪ್ರವೇಶ ಇತ್ತು. ದೇವಸ್ಥಾನದ ಆಡಳಿತ ಮಂಡಳಿಯವರು ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ, ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು.