ಏಷ್ಯಾಕಪ್ 2022 ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಪ್ರಯಾಣ ಅಂತ್ಯಗೊಳಸಿದೆ. ಅಫ್ಘಾನಿಸ್ತಾನದ ವಿರುದ್ಧದ ಗೆಲವು ಟೀಂ ಇಂಡಿಯಾಗೆ ಆತ್ಮವಿಶ್ವಾಸ ತುಂಬಿದೆ. ಮುಂಬರುವ ಟಿ20 ವಿಶ್ವಕಪ್ಗಾಗಿ ತಂಡವನ್ನು ಆಯ್ಕೆ ಮಾಡಬೇಕಿದೆ. ಏಷ್ಯಾಕಪ್ ಫೈನಲ್ ನಂತರ ತಂಡವನ್ನು ಹೆಸರಿಸುವುದಾಗಿ ಬಿಸಿಸಿಐ ಹೇಳಿತ್ತು, ಅದರಂತೆ ಈಗ ಸೆಪ್ಟೆಂಬರ್ 16 ರಂದು ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಘೋಷಣೆ ಮಾಡಲಾಗುತ್ತದೆ.
ಭಾರತ ತಂಡವನ್ನು ಆಯ್ಕೆ ಮಾಡುವ ಮುನ್ನ ಪ್ರಮುಖ ಬೌಲರ್ ಗಳಾದ ಹರ್ಷಲ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಫಿಟ್ನೆಸ್ ಪರೀಕ್ಷೆಗೆ ಕರೆದಿದ್ದಾರೆ. “ತಂಡವನ್ನು ಸಲ್ಲಿಸಲು ಕೆಲವು ದಿನಗಳಿವೆ. ನಮಗೆ ಜಸ್ಪ್ರಿತ್ ಮತ್ತು ಹರ್ಷಲ್ ಅವರ ಫಿಟ್ನೆಸ್ ಅಪ್ಡೇಟ್ ಅಗತ್ಯವಿದೆ. ಹಾಗಾಗಿ ಎಲ್ಲವೂ ಮುಗಿದ ಬಳಿಕ ತಂಡವನ್ನು ಪ್ರಕಟಿಸುತ್ತೇವೆ. ಗಾಯದ ಮೌಲ್ಯಮಾಪನಕ್ಕಾಗಿ ಜಸ್ಪ್ರೀತ್ ಈ ವಾರ ಎನ್ಸಿಎಗೆ ಹಾಜರಾಗುವ ನಿರೀಕ್ಷೆಯಿದೆ.” ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಬೆನ್ನುನೋವಿನ ಕಾರಣ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ನಂತರ ಬುಮ್ರಾ ಆಟದಿಂದ ಹೊರಗುಳಿದಿದ್ದರು. ಹರ್ಷಲ್ ಪಟೇಲ್ ಕೂಡ ಪಕ್ಕೆಲುಬಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಹರ್ಷಲ್ ಪಟೇಲ್ ಫಿಟ್, ಬುಮ್ರಾ ಅನುಮಾನ
ಹರ್ಷಲ್ ಪಟೇಲ್ ಮತ್ತು ಜಸ್ಪ್ರಿತ್ ಬುಮ್ರಾ ಫಿಟ್ನೆಸ್ ಪರೀಕ್ಷೆಗಾಗಿ ಎನ್ಸಿಎ ತಲುಪಿದ್ದಾರೆ. ಎನ್ಸಿಎ ಮೂಲಗಳ ಪ್ರಕಾರ ಹರ್ಷಲ್ ಪಟೇಲ್ ತಂಡಕ್ಕೆ ವಾಪಸ್ ಬರುವುದು ಬಹುತೇಕ ಖಚಿತವಾಗಿದೆ. ಆದರೆ ಬುಮ್ರಾ ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಬಗ್ಗೆ ಅನುಮಾನವಿದೆ.
ಹರ್ಷಕ್ ಪಟೇಲ್ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಆದರೆ ಮೂಲಗಳ ಪ್ರಕಾರ ಬುಮ್ರಾ ಇನ್ನೂ ಬೌಲಿಂಗ್ ಅಭ್ಯಾಸ ಪ್ರಾರಂಭಿಸಿಲ್ಲ. ವಿಶ್ವಕಪ್ಗೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಆಯ್ಕೆದಾರರು, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಬುಮ್ರಾ ಅವರ ಅಂತಿಮ ಫಿಟ್ನೆಸ್ ವರದಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಸೆಪ್ಟೆಂಬರ್ 16ರಂದು ಭಾರತ ತಂಡ ಆಯ್ಕೆ
ಟಿ20 ವಿಶ್ವಕಪ್ ತಂಡ ಸಲ್ಲಿಸಲು ಸೆಪ್ಟೆಂಬರ್ 16ರಂದು ಕೊನೆ ದಿನವಾಗಿದ್ದು, ಅದೇ ದಿನ ಆಯ್ಕೆ ಸಭೆ ನಡೆಯಲಿದೆ. ಸಭೆ ಮುಕ್ತಾಯವಾದ ನಂತರ ಭಾರತ ತಂಡವನ್ನು ಪ್ರಕಟಿಸಲಿದೆ. ಈಗಾಗಲೇ ಭಾರತ ತಂಡದ ಆಯ್ಕೆ ಶೇಕಡ 90 ರಿಂದ 95 ರಷ್ಟು ಅಂತಿಮವಾಗಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ತಂಡದ ಆಯ್ಕೆ ವಿಳಂಬವಾಗಲು ಬೌಲರ್ ಗಳ ಗಾಯದ ಸಮಸ್ಯೆ ಕಾರಣವಾಗಿದೆ. ಏಷ್ಯಾಕಪ್ನಲ್ಲಿ ಈಗಾಗಲೇ ಭಾರತ ಬೌಲಿಂಗ್ ವಿಭಾಗದ ದೌರ್ಬಲ್ಯ ಗೊತ್ತಾಗಿದ್ದು, ಹರ್ಷಲ್ ಪಟೇಲ್, ಬುಮ್ರಾ ಅನುಪಸ್ಥಿತಿ ಕಾಡಿತ್ತು. ವಿಶ್ವಕಪ್ಗೆ ಈ ಇಬ್ಬರ ಉಪಸ್ಥಿತಿ ಟೀಂ ಇಂಡಿಯಾಗೆ ಮುಖ್ಯವಾಗಿದೆ.
ಬುಮ್ರಾ ಅಲಭ್ಯರಾದರೆ ಶಮಿ ಆಯ್ಕೆ ಸಾಧ್ಯತೆ
ಒಂದು ವೇಳೆ ಜಸ್ಪ್ರಿತ್ ಬುಮ್ರಾ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲಾದರೆ ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಭಾರಿ ಹೊಡೆತ ಬೀಳಲಿದೆ. ಆಸ್ಟ್ರಲಿಯಾದಂತ ವೇಗದ ಪಿಚ್ಗಳಲ್ಲಿ ಬುಮ್ರಾ ಪ್ರಮುಖ ಬೌಲಿಂಗ್ ಅಸ್ತ್ರವಾಗಬಲ್ಲರು. ಒಂದು ವೇಳೆ ಬುಮ್ರಾ ಸಂಪೂರ್ಣವಾಗಿ ಗುಣಮುಖರಾಗದಿದ್ದರೆ ಅವರ ಬದಲಿಗೆ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಈಗಾಗಲೇ ಏಷ್ಯಾಕಪ್ಗೆ ಶಮಿ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಹಲವು ಹಿರಿಯ ಆಟಗಾರರು ಅಭಿಪ್ರಾಯಪಟ್ಟಿದ್ದರು. ಟೀಂ ಇಂಡಿಯಾ ಆಯ್ಕೆಯೇ ಸರಿಯಾಗಿಲ್ಲ ಎಂದು ಟೀಕೆ ಮಾಡಿದ್ದರು.